ಕೈಲಾಸನಗರ, ಅ. 8– ‘ಯಂಗ್ ಟರ್ಕ್’ ಗುಂಪಿನ ನಾಯಕ ಚಂದ್ರಶೇಖರ್ ಮತ್ತು ಇತರ ಕೆಲವರು ನಾಮಪತ್ರ ಸಲ್ಲಿಸಿರುವುದರಿಂದ ಆಡಳಿತ ಕಾಂಗ್ರೆಸ್ಸಿನ ಕೇಂದ್ರ ಚುನಾವಣಾ ಸಮಿತಿಗೆ 7 ಸದಸ್ಯರ ಆಯ್ಕೆಯಲ್ಲಿ ಸ್ಪರ್ಧೆ ಅನಿವಾರ್ಯವೆಂದು ಕಂಡುಬರುತ್ತಿದೆ.
ಹೈಕಮಾಂಡ್ ಕೃಪೆಗೊಳಗಾದವರಲ್ಲಿ ಒಬ್ಬರಾದವರೆಂದು ಹೇಳಲಾದ ಚಂದ್ರ ಶೇಖರ್ರವರು ‘ಸ್ಪರ್ಧಿಸಲು ನಾನು ದೃಢನಿರ್ಧಾರ ಕೈಗೊಂಡಿದ್ದೇನೆ’ ಎಂದಿದ್ದಾರೆ.
ಆದರೆ, ಹೈಕಮಾಂಡಿನ ಬೆಂಬಲ ಪಡೆದ ಏಳು ಮಂದಿಯಲ್ಲಿ ಐವರು ಆಯ್ಕೆಯಾಗಿರುವುದು ಖಚಿತ. ಅವರು: ಕೊಲ್ಲೂರು ಮಲ್ಲಪ್ಪ, ಉಮಾಶಂಕರ ದೀಕ್ಷಿತ್, ಕೆ. ಬ್ರಹ್ಮಾನಂದರೆಡ್ಡಿ, ಸ್ವರಣ್ ಸಿಂಗ್ ಮತ್ತು ಮೋಹನಲಾಲ್ ಸುಖಾಡಿಯಾ.
ವಿದೇಶದಿಂದ ಬಂದ ಸ್ವದೇಶಿ
ಸಿಮ್ಲಾ, ಅ. 8– ವಿದೇಶೀಯವಾದದ್ದು ಏನೇ ಇರಲಿ, ಅದಕ್ಕಾಗಿ ತೀವ್ರವಾಗಿ ಅಪೇಕ್ಷೆ ಪಡುವ ತಮ್ಮ ದೇಶದ ಕೆಲವರನ್ನು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಟೀಕಿಸಿದರು.