ಆಡಳಿತ ಕಾಂಗ್ರೆಸ್ಗೆ ಲೋಕಸಭೆಯಲ್ಲಿ ನಿಸ್ಸಂದಿಗ್ಧ ಬಹುಮತ ನವದೆಹಲಿ, ಮಾರ್ಚ್ 11– ಜನಸ್ತೋಮದಿಂದ ಬಯಸಿದ ಆದೇಶ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರಿಗೆ ಖಚಿತವಾಗಿ ದೊರೆತಿದೆ. ಒಂದು ವರ್ಷ ಮುಂಚಿತವಾಗಿ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಆಡಳಿತ ಕಾಂಗ್ರೆಸ್ ಪಕ್ಷ ನಿಚ್ಚಳ ಬಹುಮತವನ್ನು ಗಳಿಸಿ ಭಾರಿ ಬಹುಮತದತ್ತ ಧಾವಿಸುತ್ತಿದೆ.
ರಾತ್ರಿ 10 ಗಂಟೆಯವರೆಗೆ ಪ್ರಕಟವಾದ 374 ಸ್ಥಾನಗಳ ಫಲಿತಾಂಶಗಳಲ್ಲಿ ಆಡಳಿತ ಕಾಂಗ್ರೆಸ್ 280 ಸ್ಥಾನಗಳನ್ನು ಪಡೆದಿದೆ.
ಕಳೆದ ಡಿಸೆಂಬರ್ 27ರಂದು ಲೋಕಸಭೆಯ ವಿಸರ್ಜನೆಗೆ ಸಲಹೆ ಮಾಡಿದ ಪ್ರಧಾನಮಂತ್ರಿ, ಸಮಾಜವಾದಿ ಹಾಗೂ ಜಾತ್ಯತೀತ ಕಾರ್ಯಕ್ರಮಗಳನ್ನೂ ನೀತಿಗಳನ್ನೂ ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಜನತೆಯಿಂದ ಹೊಸ ಆದೇಶ ಪಡೆಯಲು ಉದ್ದೇಶಪಟ್ಟಿದ್ದರು.
ಮುಖ್ಯಮಂತ್ರಿಗಳ ಆಶ್ಚರ್ಯ, ದಿಗ್ಭ್ರಮೆ ಬೆಂಗಳೂರು, ಮಾರ್ಚ್ 11- ಮೈಸೂರು ರಾಜ್ಯದಲ್ಲಿ ಲೋಕಸಭಾ ಚುನಾವಣಾ ಫಲಿತಾಂಶ ತಮಗೆ ಅತ್ಯಂತ ಆಶ್ಚರ್ಯ ಮತ್ತು ದಿಗ್ಭ್ರಮೆಯನ್ನುಂಟು ಮಾಡಿದೆ ಎಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ಇಲ್ಲಿ ಹೇಳಿದರು.
ಫಲಿತಾಂಶ ಪ್ರವೃತ್ತಿಯ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾ ಶ್ರೀ ಪಾಟೀಲರು, ‘ನಮ್ಮ ರಾಜ್ಯದ ಮಟ್ಟಿಗೆ ಹೇಳುವುದಾದರೆ ನನಗೆ ಅತ್ಯಂತ ಆಶ್ಚರ್ಯ ಮತ್ತು ದಿಗ್ಭ್ರಮೆಯನ್ನು ಉಂಟು ಮಾಡಿದೆ. ಆದರೆ ಈ ಪ್ರವೃತ್ತಿ ದೇಶದಾದ್ಯಂತ ಇರುವಂತೆ ಕಂಡುಬರುತ್ತಿದೆ’ ಎಂದರು.