ಸಂಸ್ಥಾ ಕಾಂಗ್ರೆಸ್, ಜನಸಂಘ, ಸಂಯುಕ್ತ ಸೋಷಲಿಸ್ಟ್ ಪಕ್ಷ ಸೇರಿ ಹೊಸ ರಂಗ ರಚನೆ
ನವದೆಹಲಿ, ಜ. 3– ಲೋಕಸಭೆಗೆ ನಡೆಯುವ ಮಧ್ಯಂತರ ಚುನಾವಣೆಯಲ್ಲಿ ಆಡಳಿತ ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಉದ್ದೇಶದಿಂದ ಸ್ವತಂತ್ರ ಪಕ್ಷವನ್ನು ಬಿಟ್ಟು ಸಂಸ್ಥಾ ಕಾಂಗ್ರೆಸ್, ಜನಸಂಘ ಮತ್ತು ಸಂಯುಕ್ತ ಸೋಷಲಿಸ್ಟ್ ಪಕ್ಷಗಳು ಹೊಸ ರಂಗ ರಚಿಸಿಕೊಂಡಿರುವುದನ್ನು ಈ ರಾತ್ರಿ ಇಲ್ಲಿ ಪ್ರಕಟಿಸಿದವು.
ಸಂಸ್ಥಾ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್.ನಿಜಲಿಂಗಪ್ಪ, ಜನಸಂಘದ ಅಧ್ಯಕ್ಷ ಶ್ರೀ ಎ.ಬಿ.ವಾಜಪೇಯಿ, ಸಂಯುಕ್ತ ಸೋಷಲಿಸ್ಟ್ ಕೇಂದ್ರ ಸಂಸದೀಯ ಮಂಡಳಿಯ ಅಧ್ಯಕ್ಷ ಶ್ರೀ ರಾಮಸೇವಕ ಯಾದವ್ ಮತ್ತು ಪ್ರಧಾನ ಕಾರ್ಯದರ್ಶಿ ಜಾರ್ಜ್ ಫರ್ನಾಂಡಿಸ್ ಅವರು ಸಹಿ ಹಾಕಿ ಈ ಹೇಳಿಕೆ ನೀಡಿದ್ದಾರೆ.
ಶ್ರೀಸಾಮಾನ್ಯರ ಹಿತಕ್ಕೆ ಶ್ರಮಿಸಲು ವಿಜ್ಞಾನಿಗಳಿಗೆ ಪ್ರಧಾನಿ ಕರೆ
ಬೆಂಗಳೂರು, ಜ. 3– ತಮ್ಮ ಸಂಸ್ಥೆ ಹಾಗೂ ಸಂಶೋಧನೆಗಳ ಸೀಮಿತ ಸ್ಥಾನ ಬಿಟ್ಟು,ಶ್ರೀಸಾಮಾನ್ಯರ ಹಿತ ವರ್ಧಿಸುವ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಿಗೆ ಇಳಿದು, ಸಮಾಜದ ಅವಿಭಾಜ್ಯ ಅಂಗವಾಗಿ ಕಾರ್ಯೋನ್ಮುಖರಾಗಬೇಕು ಎಂದು ಪ್ರಧಾನ ಮಂತ್ರಿ ಇಂದಿರಾ ಗಾಂಧಿ ವಿಜ್ಞಾನಿಗಳಿಗೆ ಕರೆ ನೀಡಿದ್ದಾರೆ.
ಸೆಂಟ್ರಲ್ ಕಾಲೇಜು ಆವರಣದಲ್ಲಿ ನಿರ್ಮಿಸಿರುವ ‘ರಾಮನ್ ಮಂಟಪ’ದಲ್ಲಿ ಆರಂಭವಾದ ‘ಭಾರತೀಯ ವಿಜ್ಞಾನ ಕಾಂಗ್ರೆಸ್’ನ 58ನೇ ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.