ಪಾಕಿಸ್ತಾನ, ಚೀನ ಜತೆ ವಿವಾದ ಇತ್ಯರ್ಥಕ್ಕೆ ಸಿದ್ಧ: ಇಂದಿರಾ ಘೋಷಣೆ
ನವದೆಹಲಿ, ಜ. 1– ದೇಶದ ಗೌರವ, ಪ್ರತಿಷ್ಠೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಚೀನ– ಪಾಕಿಸ್ತಾನಗಳೊಡನೆ ಹೊಂದಿರುವ ವಿವಾದಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಭಾರತ ಸಿದ್ಧವಿದೆಯೆಂದು ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾಗಾಂಧಿಯವರು ಇಂದು ಇಲ್ಲಿ ಪುನರುಚ್ಚರಿಸಿದರು.
ಎಷ್ಟಾದರೂ ಹೆಣ್ಣು!
ನವದೆಹಲಿ, ಜ. 1– ಪತ್ನಿಯನ್ನು ಪತಿ ಹೊಡೆ ಯುವ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಇದು ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ಇಂದು ಪತ್ರಿಕಾಗೋಷ್ಠಿಯಲ್ಲಿ ಎದುರಿಸಿದ ಕೊನೆಯ ಪ್ರಶ್ನೆ.
ಜಪಾನಿನ ಪ್ರಧಾನಮಂತ್ರಿ ವೈವಾಹಿಕ ಜೀವನದ ತಾರುಣ್ಯದಲ್ಲಿ ತಮ್ಮ ಪತ್ನಿ ಶ್ರೀಮತಿ ಸಾಟೋ ಅವರನ್ನು ಥಳಿಸುತ್ತಿದ್ದರೆಂಬ ವರದಿ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ಎಂದು ವಿದೇಶಿ ಪರ್ತಕರ್ತನೊಬ್ಬ ಕೇಳಿದ.
‘ಹೊಡೆಯುವುದನ್ನು ನಾನು ವಿರೋಧಿಸುತ್ತೇನೆ. ಎಲ್ಲಾ ರೀತಿಯ ಒದೆತಗಳಿಗೂ ನನ್ನ ವಿರೋಧವಿದೆ’ ಶ್ರೀಮತಿ ಗಾಂಧಿಯವರ ಮುಗುಳ್ನಗೆಯ ಈ ಉತ್ತರವನ್ನು ಸುದ್ದಿಗಾರರು ಹರ್ಷೋದ್ಗಾರಗಳಿಂದ ಸ್ವಾಗತಿಸಿದರು.
ಪತ್ರಿಕಾಗೋಷ್ಠಿ ಮುಗಿದನಂತರ ಶ್ರೀಮತಿ ಇಂದಿರಾಗಾಂಧಿಯವರು ಈ ಪ್ರಶ್ನೆ ಕೇಳಿದ ಸುದ್ದಿಗಾರರನ್ನು ಕೇಳಿದರು ‘ನೀವು ನಿಮ್ಮ ಹೆಂಡತಿಗೆ ಹೊಡೆಯುತ್ತೀರಾ?’ ಆತ ‘ಇಲ್ಲ’ ಎಂದು ಉತ್ತರಿಸಿದ.
ರಾಜ್ಯಗಳ ಮರುವಿಂಗಡಣೆ ಇನ್ನಿಲ್ಲ
ನವದೆಹಲಿ, ಜ. 1– ರಾಜ್ಯಗಳ ಪುನರ್ ವಿಂಗಡಣೆ ಇನ್ನಿಲ್ಲವೆಂದು ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿಯವರು ಇಂದು ಇಲ್ಲಿ ತಿಳಿಸಿದರು.
ಸಣ್ಣ ರಾಜ್ಯಗಳನ್ನು ರಚಿಸಬೇಕೆಂಬ ಸರ್ವೋದಯ ನಾಯಕ ಜಯಪ್ರಕಾಶ್ ನಾರಾಯಣ್ ಅವರ ಸಲಹೆಯನ್ನು ಸುದ್ದಿಗಾ ರರು ಇಂದು ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿಯ ಗಮನಕ್ಕೆ ತಂದರು.
ಡಾ. ರಾಮನ್ ಅವರಿಗೆ ಜೀವವಿಜ್ಞಾನ ಸಂಘದ ಗೌರವ ಫೆಲೋಷಿಪ್
ಮದ್ರಾಸ್, ಜ. 1– ಇಲ್ಲಿನ ಜೀವವಿಜ್ಞಾನ ಸಂಘ ನೊಬೆಲ್ ಪ್ರಶಸ್ತಿ ವಿಜೇತ ಡಾ. ಸಿ.ವಿ. ರಾಮನ್ ಅವರಿಗೆ ಗೌರವ ಫೆಲೋಷಿಪ್ ನೀಡಿ ಸನ್ಮಾನಿಸಿತು.