ನಾಳೆಯಿಂದ ನಾಗರಿಕರಿಗೆ ಉಚಿತ ನೀರಿನ ಸೌಲಭ್ಯ: ಸಂಪುಟದ ನಿರ್ಧಾರ
ಬೆಂಗಳೂರು, ಡಿ. 30– ನಗರದಲ್ಲಿ ಗೃಹಕೃತ್ಯ ಬಳಕೆಗಾಗಿ ತಿಂಗಳಿಗೆ 25 ಸಾವಿರ ಲೀಟರ್ ನೀರನ್ನು ಉಚಿತವಾಗಿ ನೀಡಬೇಕೆಂದು ಮಂತ್ರಿಮಂಡಲ ಇಂದು ನಿರ್ಧರಿಸಿತು. ಇದು 1969ನೇ ಜನವರಿ 1ರಿಂದ ಜಾರಿಗೆ ಬರುವುದು.
ಸಂಪುಟದ ನಿರ್ಧಾರವನ್ನು ವರದಿಗಾರರಿಗೆ ತಿಳಿಸುತ್ತಾ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ‘ವಿಧಾನ ಮಂಡಲದ ಅಂದಾಜು ಸಮಿತಿಯ ಶಿಫಾರಸನ್ನು ಅಂಗೀಕರಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ’ ಎಂದು ಹೇಳಿದರು.
ನಗರದಲ್ಲಿ ಸೈಕಲ್ ತೆರಿಗೆ ರದ್ದು
ಬೆಂಗಳೂರು, ಡಿ. 30– ಬೆಂಗಳೂರು ನಗರದಲ್ಲಿ 1969ನೇ ಜನವರಿಯಿಂದ ಸೈಕಲ್ ತೆರಿಗೆ ರದ್ದುಗೊಳಿಸಲು ಮಂತ್ರಿಮಂಡಲ ಇಂದು ನಿರ್ಧರಿಸಿತು.
ಹೊಸ ವರ್ಷದಿಂದ ಕೋಲಾರ ವಿಭಾಗದ ರಾಷ್ಟ್ರೀಕೃತ ರಸ್ತೆ ಸಾರಿಗೆ ಆರಂಭ
ಬೆಂಗಳೂರು, ಡಿ. 30– ಹೊಸ ವರ್ಷದ ಮೊದಲ ದಿನದಿಂದ ಕೋಲಾರ ವಿಭಾಗದ ರಸ್ತೆಗಳಲ್ಲಿ 120 ಕೆಂಪುಬಣ್ಣದ ರಸ್ತೆ ಸಾರಿಗೆ ಕಾರ್ಪೋರೇಷನ್ ಬಸ್ಗಳು ಓಡಾಟ ಪ್ರಾರಂಭಿಸಲಿವೆ.
ತನ್ನ ತೃತೀಯ ಯೋಜನೆಯ ಗುರಿಯಾದ ಎಂಟು ವಿಭಾಗಗಳ ರಸ್ತೆ ಸಾರಿಗೆ (ಪ್ರಯಾಣಿಕರ) ರಾಷ್ಟ್ರೀಕರಣವನ್ನು ಕಾರ್ಪೋರೇಷನ್ ಜನವರಿ ಒಂದರಂದು ಕೋಲಾರ ವಿಭಾಗದಲ್ಲಿ 87 ಮಾರ್ಗಗಳಲ್ಲಿ ಬಸ್ಗಳ ಓಡಾಟದ ಮೂಲಕ ಸಾಧಿಸಲಿದೆ.