ಬೆಲೆಗಳಲ್ಲಿ ನಿರಂತರವಾಗಿ ಏರಿಕೆಯಾಗುವುದನ್ನು ಹಣದುಬ್ಬರ ಎನ್ನಲಾಗಿದೆ. ಇಂದು ನಮ್ಮಲ್ಲಿ ನಿರುದ್ಯೋಗ, ವರಮಾನದಲ್ಲಿನ ಕುಸಿತ, ಆರೋಗ್ಯ ಸೇವಾ ವೆಚ್ಚದಲ್ಲಿನ ಏರಿಕೆಯಿಂದಾಗಿ ದುಡಿಮೆಗಾರರ ಬದುಕು ಮೂರಾ ಬಟ್ಟೆಯಾಗಿದೆ. ಬೆಲೆ ಏರಿಕೆಯಿಂದ ಹಣದ ಕೊಳ್ಳುವ ಶಕ್ತಿ ಇಳಿಯುತ್ತದೆ ಮತ್ತು ಜನರ ನಿಜ ವರಮಾನದಲ್ಲಿ ಕುಸಿತವುಂಟಾಗುತ್ತದೆ (ಪ್ರ.ವಾ., ಏ. 12). ರಾಜ್ಯದ 2022-23ನೆಯ ಸಾಲಿನ ಒಟ್ಟು ಸ್ವಂತ ತೆರಿಗೆ ರಾಶಿ ₹ 1.27 ಲಕ್ಷ ಕೋಟಿ. ಇದರಲ್ಲಿ ಸರಿಸುಮಾರು ಶೇ 92ರಷ್ಟು ಅಪ್ರತ್ಯಕ್ಷ ತೆರಿಗೆಗಳಾಗಿವೆ (ಎಸ್ಜಿಎಸ್ಟಿ, ರಾಜ್ಯ ಅಬಕಾರಿ, ವಾಹನ ತೆರಿಗೆ, ಮುಂದ್ರಾಂಕ-ನೋಂದಣಿ ಶುಲ್ಕ, ಮಾರಾಟ ತೆರಿಗೆ (ವ್ಯಾಟ್) ಇತ್ಯಾದಿ). ಈ ಕಾರಣದಿಂದ ಹಣದುಬ್ಬರದ ಯಮಘಾತದಿಂದ ದುಡಿಮೆಗಾರರ ಬದುಕು ದುಃಸ್ಥಿತಿಗೊಳಗಾಗುತ್ತದೆ.