ದೆಹಲಿ ಬಳಿ ವಿಮಾನ ಸ್ಫೋಟ: 22 ಸಾವು
ನವದೆಹಲಿ, ಮಾರ್ಚ್ 7 (ಪಿಟಿಐ, ಯುಎನ್ಐ)– ಭಾರತೀಯ ವಾಯುಪಡೆಗೆ ಸೇರಿದ ಎಎನ್–32 ಸರಕು ಸಾಗಣೆ ವಿಮಾನವು ಇಂದಿರಾ ಗಾಂಧಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೆಲವೇ ಕಿ.ಮೀ. ಅಂತರದಲ್ಲಿ ಇಂದು ಬೆಳಿಗ್ಗೆ ನಿರ್ಮಾಣ ಹಂತದಲ್ಲಿದ್ದ ನೀರಿನ ಮೇಲುತೊಟ್ಟಿ ಹಾಗೂ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದ ನಂತರ ಸ್ಫೋಟಗೊಂಡು ಬೆಂಕಿ ಉಂಡೆಯಂತೆ ಉರಿದಾಗ, ಅದರಲ್ಲಿದ್ದ ಎಲ್ಲ 19 ಮಂದಿ ವಾಯುಪಡೆಯ ಸಿಬ್ಬಂದಿ ಸೇರಿ 22 ಜನ ದುರ್ಮರಣಕ್ಕೀಡಾದರು.
ನಾಲ್ವರು ಚಾಲಕ ಸಿಬ್ಬಂದಿಯೂ ಸೇರಿ ವಿಮಾನದೊಳಗಿದ್ದ ಎಲ್ಲ 19 ಮಂದಿ ಸತ್ತಿದ್ದಾರೆ. ವಿಮಾನ ಅಪ್ಪಳಿಸುವ ವೇಳೆ ನೆಲದ ಮೇಲಿದ್ದ ಮಹಿಳೆ ಮತ್ತು ಇಬ್ಬರು ಮಕ್ಕಳು ಸಜೀವ ದಹನವಾದರು. ಬೆಂಕಿ ಹೊತ್ತಿ ಉರಿಯುತ್ತಿದ್ದ ವಿಮಾನದ ಅವಶೇಷಗಳು ಜೋಪಡಿಗಳ ಮೇಲೆ ಬಿದ್ದ ಕಾರಣ ಕನಿಷ್ಠ 12 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಹಾರ: ಪ್ರಧಾನಿ ಮನವಿಗೆ ಸೋನಿಯಾ ನಕಾರ
ನವದೆಹಲಿ, ಮಾರ್ಚ್ 7 (ಪಿಟಿಐ, ಯುಎನ್ಐ)– ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ, ಬಿಹಾರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿದ ನಿರ್ಣಯಕ್ಕೆ ರಾಜ್ಯಸಭೆಯಲ್ಲಿ ಬೆಂಬಲ ನೀಡುವಂತೆ ಮಾಡಿದ ಮನವಿ ವಿಫಲವಾಯಿತು.
ನಂತರ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಿಹಾರದಲ್ಲಿ ರಾಷ್ಟ್ರಪತಿ ಆಡಳಿತವನ್ನು ಅಂತ್ಯಗೊಳಿಸಲು ಎಲ್ಲ ಸದಸ್ಯರೂ ಅಭಿಪ್ರಾಯಪಟ್ಟರು ಎಂದು ತಿಳಿದುಬಂದಿದೆ.