ಬೆಂಗಳೂರು, ನವೆಂಬರ್ 27– ಕರ್ನಾಟಕ–ಮಹಾರಾಷ್ಟ್ರಗಳ ನಡುವಿನ ಗಡಿ ವಿವಾದದ ಬಗ್ಗೆ ಮಹಾಜನ ವರದಿ ಪರಿಧಿಯೊಳಗೆ ಮಾತ್ರ ಚರ್ಚಿಸುವುದಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿ ಮನೋಹರ್ ಜೋಷಿ ಅವರಿಗೆ ಹೇಳಿದುದಾಗಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಇಂದು ಇಲ್ಲಿ ತಿಳಿಸಿದರು.
ಮುಂಬೈನಿಂದ ಹಿಂದುರಿಗಿದ ಅವರು ಸುದ್ದಿಗಾರರ ಜತೆಗೆ ಮಾತನಾಡುತ್ತಾ, ‘ಮಂಗಳವಾರ ಜೋಷಿ ಅವರೊಂದಿಗೆ ಚರ್ಚಿಸಿದ ಸಂದರ್ಭದಲ್ಲಿ ಉಭಯ ರಾಜ್ಯಗಳ ನಡುವಿನ ಗಡಿ ಹಾಗೂ ಜಲ ವಿವಾದಗಳು ಸುವರ್ಣ ಸ್ವಾತಂತ್ರ್ಯೋತ್ಸವ ವರ್ಷದ ಅಂತ್ಯದ ಒಳಗೆ ಅವರು ಬಗೆಹರಿಯಬೇಕು ಎಂದು ಅವರು ಬಯಸುತ್ತಿದ್ದಾರೆ’ ಎಂದರು.
ರಾಣೆಬೆನ್ನೂರು ಬಳಿ ಬಸ್ ಹಳ್ಳಕ್ಕೆ ಬಿದ್ದು 34 ಸಾವು
ದಾವಣಗೆರೆ, ನವೆಂಬರ್ 27– ರಾಣೆ ಬೆನ್ನೂರು ತಾಲ್ಲೂಕಿನ ಹಲಗೇರಿ ಬಳಿ ಇಂದು ರಾತ್ರಿ ಬಸ್ಸೊಂದು ತುಂಬಿ ಹರಿಯುತ್ತಿದ್ದ ಹಳ್ಳಕ್ಕೆ ಬಿದ್ದು, ಪ್ರವಾಹದಲ್ಲಿ ಕೊಚ್ಚಿ ಹೋಗಿ ಕನಿಷ್ಠ 34 ಮಂದಿ ಮೃತಪಟ್ಟಿದ್ದಾರೆ. ಸತ್ತವರಲ್ಲಿ 14 ಮಂದಿ ಮಹಿಳೆಯರು ಹಾಗೂ ಏಳು ಮಕ್ಕಳು ಸೇರಿದ್ದಾರೆ.
ಸುಮಾರು 35 ಗಾಯಾಳುಗಳನ್ನು ದಾವಣಗೆರೆಯ ಚಿಗಟಗೇರಿ ಆಸ್ಪತ್ರೆಗೆ ಸೇರಸಲಾಗಿದೆ. ಗಾಯಾಳುಗಳ ಪೈಕಿ ನಾಲ್ಕು ಜನರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದುಆಸ್ಪತ್ರೆಯ ಮೂಲಗಳು ತಿಳಿಸಿವೆ.