ಸಕ್ರಿಯ ರಾಜಕೀಯಕ್ಕೆ ಮತ್ತೆ ಕಡಿದಾಳ್: ಆಡಳಿತ ಕಾಂಗ್ರೆಸ್ ಪರ ಪ್ರಚಾರಕ್ಕೆ ನಿರ್ಧಾರ
ಬೆಂಗಳೂರು, ಫೆ. 7– ರಾಜ್ಯದ ಹಿರಿಯ ರಾಜಕಾರಣಿ ಹಾಗೂ ಮಾಜಿ ಮುಖ್ಯಮಂತ್ರಿ ಶ್ರೀ ಕಡಿದಾಳ್ ಮಂಜಪ್ಪ ಅವರು ‘ನಿಷ್ಕ್ರಿಯವಾಗಿ ಇರುವುದು ಸಮಸ್ಯೆಗೆ ಪರಿಹಾರವಲ್ಲ’ ಎಂಬ ನಂಬಿಕೆಯಿಂದ ರಾಜಕಾರಣದಲ್ಲಿ ಹೆಚ್ಚು ಆಸಕ್ತಿ ವಹಿಸಲು ನಿರ್ಧರಿಸಿದ್ದಾರೆ.
ಈ ನಿರ್ಧಾರದ ಪರಿಣಾಮವಾಗಿ ಶ್ರೀಯುತರು ತತ್ಕ್ಷಣ ಆಡಳಿತ ಕಾಂಗ್ರೆಸ್ಸಿಗೆ ಸೇರದಿದ್ದರೂ ಮಧ್ಯಂತರ ಚುನಾವಣೆಯಲ್ಲಿ ಆಡಳಿತ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುವರು.
67ರಿಂದ ಕಾಂಗ್ರೆಸ್ ಸದಸ್ಯರಾಗಿಲ್ಲದ ಶ್ರೀ ಕಡಿದಾಳ್ ಅವರು ಬೆಳಿಗ್ಗೆ ಅವರ ಮನೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಾವು ಸಕ್ರಿಯ ರಾಜಕಾರಣಕ್ಕೆ ಪುನಃ ಪ್ರವೇಶಿಸುವುದನ್ನು ಪ್ರಕಟಿಸಿದರು.
ಸುರಾದೇವಿ ಭಕ್ತರು– ಆದರೂ ಅಪರಾಧ ಪ್ರವೃತ್ತಿ ಕಡಿಮೆ
ಪಣಜಿ, ಫೆ. 7– ವಿಶ್ವದಲ್ಲೇ ಅತಿ ಹೆಚ್ಚಾಗಿ ‘ಕುಡಿತದ’ ಚಟ ಕಂಡುಬಂದಿರುವುದು ಗೋವೆಯ ಜನರಲ್ಲಿ. ಆದರೂ ಈ ಜನರಲ್ಲಿ ಅಪರಾಧ, ಹಿಂಸಾಕೃತ್ಯದ ಮನೋಭಾವ ಭಾರತದ ಇತರ ಭಾಗಗಳಿಗಿಂತ, ವಿಶ್ವದ ಬೇರೆ ರಾಷ್ಟ್ರಗಳಿಗಿಂತ ಬಹಳ ಕಡಿಮೆ.
ಗೋವಾ ವೈದ್ಯಕೀಯ ಕಾಲೇಜ್ ಆಸ್ಪತ್ರೆಯಲ್ಲಿ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ ಶರ್ಮಾ ಅವರು ‘ಗೋವಾ ದಲ್ಲಿ ಮದ್ಯಸೇವನೆ ಮತ್ತು ಅಪರಾಧ ಪ್ರವೃತ್ತಿ’ ಬಗ್ಗೆ ನಡೆಸಿದ ಸಂಶೋಧನೆಯಿಂದ ಈ ಅಂಶ ವ್ಯಕ್ತಪಟ್ಟಿದೆ.