ಬಿಹಾರದಲ್ಲಿ ರಾಷ್ಟ್ರಪತಿ ಆಡಳಿತ? ಇನ್ನೆರಡು ದಿನಗಳಲ್ಲಿ ಘೋಷಣೆ ನಿರೀಕ್ಷೆ
ನವದೆಹಲಿ, ಜೂನ್ 26– ಇನ್ನೊಂದೆರಡು ದಿನಗಳಲ್ಲಿ ಬಿಹಾರ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬರುವ ನಿರೀಕ್ಷೆಯಿದೆ.
ಬಿಹಾರ ರಾಜ್ಯಪಾಲ ಶ್ರೀ ನಿತ್ಯಾನಂದ ಕನುಂಗೋ ಅವರು ನಿಗದಿಪಡಿಸಿದ ಅವಧಿಯೊಳಗೆ ಬೇರೆ ಸರ್ಕಾರ ರಚಿಸುವುದರಲ್ಲಿ ಬಿಹಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಶ್ರೀ ಎಂ.ಪಿ. ಸಿನ್ಹ ಅವರು ವಿಫಲವಾಗಿರುವುದೇ ಇದಕ್ಕೆ ಕಾರಣ.
ಮಹಾಜನ್ ವರದಿ: ಉದ್ದೇಶಿತ ಹೊಸ ಸಮಿತಿಗೆ ಒಪ್ಪಿಸಲು ಕೇಂದ್ರ ನಿರ್ಧರಿಸಿಲ್ಲ– ನಾಯಕ್
ಮುಂಬೈ, ಜೂ. 26– ಮಹಾರಾಷ್ಟ್ರ–ಮೈಸೂರು ಗಡಿ ವಿವಾದವನ್ನು ಕುರಿತ ಮಹಾಜನ್ ಆಯೋಗದ ವರದಿ ಬಗ್ಗೆ ಕೇಂದ್ರ ಸರ್ಕಾರ ಏನೂ ಆಲೋಚಿಸಿಲ್ಲ. ಅಂತರರಾಜ್ಯ ಗಡಿ ವಿವಾದಗಳನ್ನು ಇತ್ಯರ್ಥಪಡಿಸಲು ಇತ್ತೀಚೆಗೆ ರಾಷ್ಟ್ರ ಸಮಗ್ರತೆ ಮಂಡಲಿ ಸಭೆಯಲ್ಲಿ ಸೂಚಿಸಲಾದ ವ್ಯವಸ್ಥೆಯೊಂದಕ್ಕೆ ಈ ವಿಷಯವನ್ನು ಒಪ್ಪಿಸಬೇಕೆ ಎಂಬುದನ್ನು ಅದು ಇನ್ನೂ ನಿರ್ಧರಿಸಬೇಕಾಗಿದೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ವಿ.ಪಿ. ನಾಯಕ್ ಅವರು ಇಂದು ಈ ವಿಷಯವನ್ನು ತಿಳಿಸಿದರು.
‘ಗಯಾಲಾಲ್’
ಚಂಡೀಗಢ, ಜೂನ್ 26– ಗಯಾಲಾಲ್ ನಿರ್ಗಮಿಸಿದ್ದಾರೆ. ಹರಿಯಾಣದಲ್ಲಿ ನಾಲ್ಕನೆ ಸಾರ್ವತ್ರಿಕ ಚುನಾವಣೆಗಳ ನಂತರ ಅನೇಕ ಬಾರಿ ಪಕ್ಷಾಂತರಗೊಂಡು, ‘ಆಯಾರಾಮರು ಗಯಾಲಾಲರು’ ಎಂಬ ನೂತನ ರಾಜಕೀಯ ಪದಪುಂಜ ಜನಪ್ರಿಯಗೊಳಿಸಲು ಕಾರಣರಾದವರು ಶ್ರೀ ಗಯಾಲಾಲ್.