ಭೂ ಸುಧಾರಣಾ ಶಾಸನದಲ್ಲಿ ಬದಲಾವಣೆ ಅಗತ್ಯ
ಬೆಂಗಳೂರು, ಸೆ. 26 – ಇಂದಿನ ಪರಿಸ್ಥಿತಿಯಲ್ಲಿ ಭೂ – ಸುಧಾರಣೆ ಶಾಸನವನ್ನು ಜಾರಿಗೆ ತರಲು ಸಾಧ್ಯ ವಾಗಲಾರದೆಂದು ಇಂದು ವಿಧಾನ ಸಭೆಯಲ್ಲಿ ತಿಳಿಸಿದ ರೆವಿನ್ಯೂ ಸಚಿವ ಶ್ರೀ ಎಂ. ವಿ. ಕೃಷ್ಣಪ್ಪನವರು ಈ ಶಾಸನದಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡಿ ಜಾರಿಗೆ ತರಬೇಕಾಗುವುದೆಂದರು.
ಶ್ರೀ ಟಿ. ಮಾದೇಗೌಡ ಅವರ ಪ್ರಶ್ನೆಯೊಂದರ ಮೇಲೆ ಉದ್ಭವವಾದ ಹಲವು ಉಪ ಪ್ರಶ್ನೆಗಳಿಗೆ ರೆವಿನ್ಯೂ ಸಚಿವರು ಉತ್ತರ ನೀಡಿ, ಯೋಜನೆ ಮಂಡಳಿಯು ಮಾಡಿರುವ ಕೆಲವು ಸೂಚನೆಗಳಿಗನುಸರಿಸಿ, ಶಾಸನದ ತಿದ್ದುಪಡಿಯಾಗ ಬೇಕಾಗಿದೆಯೆಂದರು.
ಆಡಳಿತದಲ್ಲಿ ಮಿತವ್ಯಯ ಸಾಧನೆಗೆ ಕಾಂಗ್ರೆಸ್ ಶಾಸಕರ ಒತ್ತಾಯ
ಬೆಂಗಳೂರು, ಸೆ. 26 – ‘ಆಡಳಿತದಲ್ಲಿ ಸಾಧ್ಯವಿರುವ ಎಲ್ಲ ರೀತಿಯಲ್ಲೂ’ ಮಿತವ್ಯಯ ಸಾಧಿಸಬೇಕೆಂದು ಇಂದು ಬೆಳಿಗ್ಗೆ ನಡೆದ ವಿಧಾನ ಮಂಡಲ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಹಲವು ಸದಸ್ಯರು ಒತ್ತಾಯ ಪಡಿಸಿದರೆಂದು ತಿಳಿದು ಬಂದಿದೆ. ರಾಜ್ಯದ ಹಣಕಾಸಿನ ಪರಿಸ್ಥಿತಿಯ ಬಗ್ಗೆ ನಡೆದ ಚರ್ಚೆಯಲ್ಲಿ ಭಾಗವಹಿಸಿದ ಸದಸ್ಯರು, ಎಲ್ಲ ಮಟ್ಟದಲ್ಲೂ ಸಿಬ್ಬಂದಿಯ ವೆಚ್ಚವನ್ನು ಕಡಿಮೆ ಮಾಡಲು ಸಾಧ್ಯವೆಂದು ಅಭಿಪ್ರಾಯ ಪಟ್ಟರೆನ್ನಲಾಗಿದೆ.