ರಂಗಶಂಕರ, ಡಾ. ಅಶ್ವಥ್ ಕಲಾಸೌಧ, ನಟನ ಮೈಸೂರು ಮುಂತಾದ ಖಾಸಗಿ ಸಂಸ್ಥೆಗಳ ರಂಗಮಂದಿರಗಳು ಕೋವಿಡ್ ನಿಯಮಗಳನ್ನು ಅನುಸರಿಸಿ ಸಾಂಸ್ಕೃತಿಕ ಚಟುವಟಿಕೆ ನಡೆಸುತ್ತಿವೆ. ಸಂಸ್ಕೃತಿ ಇಲಾಖೆ ನೀಡುವ ವಿವಿಧ ಪ್ರಶಸ್ತಿಗಳನ್ನು, ಕನ್ನಡ ಸಾಹಿತ್ಯ ಪರಿಷತ್ತಿನ ನೃಪತುಂಗ ಪ್ರಶಸ್ತಿಯನ್ನು ರವೀಂದ್ರ ಕಲಾಕ್ಷೇತ್ರದಲ್ಲೇ ನೀಡಲಾಗಿದೆ. ಆದರೆ ರಂಗತಂಡಗಳಿಗೆ, ಸಂಗೀತ, ನೃತ್ಯ ಕಾರ್ಯಕ್ರಮಗಳಿಗೆ ನೀಡದಿರುವುದು ಕಲಾವಿದರಲ್ಲಿ ಕಸಿವಿಸಿ ಉಂಟುಮಾಡಿದೆ. ಕಲಾಕ್ಷೇತ್ರ, ನಯನ, ಕಲಾಗ್ರಾಮ ಸೇರಿದಂತೆ ಮೈಸೂರಿನ ಕಲಾಮಂದಿರ, ಕಿರು ರಂಗಮಂದಿರ ಹಾಗೂ ಜಿಲ್ಲಾ ರಂಗಮಂದಿರಗಳನ್ನು ಕಲಾವಿದರಿಗೆ ಶೀಘ್ರವಾಗಿ ದೊರಕಿಸಿಕೊಡಬೇಕು. ಇದರಿಂದ ಕೊರೊನಾ ಸಂಕಷ್ಟದಿಂದ ಹತಾಶರಾಗಿರುವ ಕಲಾವಿದರ ಮನಸ್ಸಿಗೆ ಒಂದಷ್ಟು ಸಾಂತ್ವನ, ಚೈತನ್ಯ ಸಿಗಲು ಸಾಧ್ಯ.