ಬಿಬಿಎಂಪಿ ಪ್ರಕಾರ, ದುಃಸ್ಥಿತಿಯಲ್ಲಿರುವ 178 ಕಟ್ಟಡಗಳನ್ನು 2019ರಲ್ಲಿ ಗುರುತಿಸಲಾಗಿತ್ತು. ಆದರೆ ಮಾಲೀಕರ ವಿರುದ್ಧ ಕ್ರಮವೂ ಇಲ್ಲ, ಅದರ ಮಾಹಿತಿಯೂ ಬಿಬಿಎಂಪಿ ಬಳಿ ಇಲ್ಲ. ಕೇವಲ ನಿಯೋಜನೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ, ಮತ್ತೆ ಮತ್ತೆ ಬದಲಾಗುವ ಆಯಕಟ್ಟಿನ ಅಧಿಕಾರಿಗಳು, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಇನ್ನೇನು ನಿರೀಕ್ಷೆ ಇಟ್ಟುಕೊಳ್ಳಬಹುದು? ಪ್ರಸ್ತುತ ಪರಿಸ್ಥಿತಿಯಲ್ಲಿ, ದುಃಸ್ಥಿತಿಯಲ್ಲಿರುವ ಕಟ್ಟಡಗಳ ಮಾಲೀಕರಿಗೆ ಕಟ್ಟಡ ನೆಲಸಮ ಅಥವಾ ನವೀಕರಣಕ್ಕೆ ಸಂಬಂಧಿಸಿದಂತೆ ಮೊದಲು ಗಡುವು ನೀಡಬೇಕು. ನಿಗದಿತ ಗಡುವಿನೊಳಗೆ ಮಾಲೀಕರು ಯಾವುದೇ ಕ್ರಮ ಕೈಗೊಳ್ಳದೇ ಹೋದಲ್ಲಿ, ಬಿಬಿಎಂಪಿಯೇ ಮುಂದಾಗಿ ಇಂತಹ ಕಟ್ಟಡಗಳನ್ನು ನೆಲಸಮ ಮಾಡಬೇಕು. ಅದರ ಖರ್ಚನ್ನು ಮಾಲೀಕರೇ ಭರಿಸಬೇಕು. ಆಗ ಮಾತ್ರ ಕಟ್ಟಡ ಕುಸಿತ ಪ್ರಕರಣಗಳು ನಿಯಂತ್ರಣಕ್ಕೆ ಬರಲು ಸಾಧ್ಯ.