ಕೋವಿಡ್ ನಿರ್ಬಂಧ ಉಲ್ಲಂಘನೆ ಆರೋಪದಲ್ಲಿ ಸಾರ್ವಜನಿಕರ ವಿರುದ್ಧ ದಾಖಲಾಗಿರುವ ಮೊಕದ್ದಮೆಗಳನ್ನು ಹಿಂಪಡೆಯುವ ಅಗತ್ಯವಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಅಭಿಪ್ರಾಯಪಟ್ಟಿರುವುದು (ಪ್ರ.ವಾ. ನ. 10) ಸೂಕ್ತವಾಗಿದೆ. ಸಮಾಜದಲ್ಲಿ ಆತಂಕ ಸೃಷ್ಟಿಸುವವರು, ಕ್ಷಮಾರ್ಹವಲ್ಲದ ಅಪರಾಧಗಳನ್ನು ಎಸಗಿದ ಆರೋಪ ಹೊತ್ತಿರುವಂತಹವರ ವಿರುದ್ಧದ ಪ್ರಕರಣಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಾಪಸ್ ಪಡೆದಿರುವ ಅನೇಕ ನಿದರ್ಶನಗಳಿವೆ. ಹೀಗಿರುವಾಗ, ಕೋವಿಡ್ ಸಮಯದಲ್ಲಿ ಹೊಟ್ಟೆಪಾಡಿಗಾಗಿ ಮತ್ತು ದಿನನಿತ್ಯದ ಅವಶ್ಯಕತೆಗಳ ಸಲುವಾಗಿ ನಿರ್ಬಂಧ ಉಲ್ಲಂಘಿಸಿದ್ದ ಜನಸಾಮಾನ್ಯರ ಮೇಲೆ ದಾಖಲಾಗಿರುವ ಪ್ರಕರಣ ಗಳನ್ನು ವಾಪಸ್ ಪಡೆದರೆ ಸರ್ಕಾರಕ್ಕೆ ಅಥವಾ ಸಮಾಜಕ್ಕೆ ಯಾವುದೇ ನಷ್ಟವಿಲ್ಲ. ಹಾಗಾಗಿ, ಕಾನೂನು ಸಚಿವರ ಸಲಹೆಯನ್ನು ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.