ಶಾಸಕರಿಗೆ, ಸಚಿವರು ಪ್ರತಿನಿಧಿಸುವ ಇಲಾಖೆಗಳಿಗೆ ಮತ್ತು ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ಹಂಚಿಕೆ ಮಾಡಲು ಮುಖ್ಯಮಂತ್ರಿಗೆ ವಿವೇಚನಾ ಅಧಿಕಾರ ಇರುವುದು ನಿಜ. ಆದರೆ ಆ ಅಧಿಕಾರ ಬಳಕೆ ಮಾಡುವ ವೈಖರಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಶ್ನಾತೀತವೇನಲ್ಲ. ಆಡಳಿತ ಪಕ್ಷದ ಶಾಸಕರು ಇರುವ ಕ್ಷೇತ್ರಗಳಿಗೆ ಹೆಚ್ಚು ಅನುದಾನ, ಬೇರೆ ಪಕ್ಷದ ಶಾಸಕರು ಇರುವ ಕ್ಷೇತ್ರಕ್ಕೆ ಕಡಿಮೆ ಅನುದಾನ ನೀಡುವ ತಾರತಮ್ಯದ ವಿವೇಚನಾಧಿಕಾರ ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತದೆ. ಅದೇ ರೀತಿ ಸಚಿವರ ಖಾತೆಯ ವಿಚಾರದಲ್ಲಿ ಸಲಹೆ ನೀಡಲು ಮುಖ್ಯಮಂತ್ರಿಗೆ ಅಧಿಕಾರ ಇದೆ. ಹಾಗಂತ ಮಂತ್ರಿಗಳ ಗಮನಕ್ಕೆ ತರದೇ ಆಯಾ ಇಲಾಖೆಗೆ ಆಯವ್ಯಯದಲ್ಲಿ ಮೀಸಲಿಟ್ಟ ಹಣವನ್ನು ಇನ್ನೊಂದು ಇಲಾಖೆಗೆ ವರ್ಗಾಯಿಸುವುದು ವಿವೇಚನಾ ಅಧಿಕಾರದ ದುರ್ಬಳಕೆಯಲ್ಲದೆ ಮತ್ತೇನೂ ಅಲ್ಲ.