ಭೂಕುಸಿತದಂತಹ ಮಹಾದುರಂತಗಳಿಗೆ ನಿಖರ ಕಾರಣ ಪತ್ತೆಹಚ್ಚುವಂತೆ ಹಾಗೂ ವಿಕೋಪಗಳನ್ನು ಪ್ರತಿಬಂಧಿಸುವ ಕ್ರಮಗಳನ್ನು ಸೂಚಿಸುವಂತೆ ಸರ್ಕಾರ ರಚಿಸಿದ್ದ ವಿಜ್ಞಾನಿಗಳು ಹಾಗೂ ಪರಿಸರತಜ್ಞರ ಸಮಿತಿಯು ಸಲ್ಲಿಸಿರುವ ವರದಿಯ ಹಿನ್ನೆಲೆಯಲ್ಲಿ ಬರೆದಿರುವ ಸಂಪಾದಕೀಯ (ಪ್ರ.ವಾ., ಏ. 5) ಅತ್ಯಂತ ಯೋಗ್ಯವಾಗಿದೆ. ಪ್ರಕೃತಿಯ ಕಿರುಕೋಪ ಸಹ ಎಂತಹ ನಾಶವನ್ನು ತಂದೊಡ್ಡುತ್ತದೆ ಎಂಬುದಕ್ಕೆ ಈಗಾಗಲೇ ಉತ್ತರ ಕರ್ನಾಟಕ, ಕೊಡಗು, ಕೇರಳ ಸಾಕ್ಷಿಯಾಗಿರುವುದನ್ನು ಅರಿಯಬೇಕು. ನಗರೀಕರಣ ಎಂಬ ವಿದೇಶಿ ಮಾದರಿಯನ್ನು ಭಾರತದಲ್ಲಿ ಕುರುಡಾಗಿ ಅನುಸರಿಸುತ್ತಿರುವುದರಿಂದ ಜನಪದ ಸಂಸ್ಕೃತಿ, ಕೂಡುಕುಟುಂಬ, ಸಮನ್ವಯಭಾವ, ಪ್ರಕೃತಿಯ ಆರಾಧನೆ, ಮಾನವೀಯ ಮೌಲ್ಯ ಇತ್ಯಾದಿಗಳನ್ನು ಗಾಳಿಗೆ ತೂರಿದ್ದಾಗಿದೆ.