ಕಲಬುರ್ಗಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಎಚ್.ಎಸ್.ವೆಂಕಟೇಶಮೂರ್ತಿ ಅವರನ್ನು ಆಯ್ಕೆ ಮಾಡಿರುವುದರಿಂದ ಪ್ರಾದೇಶಿಕ ಪ್ರಾತಿನಿಧ್ಯ ಲಭಿಸಿದಂತಾಗಿಲ್ಲ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 1960ರಲ್ಲಿ 41ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಪ್ರೊ. ಡಿ.ಎಲ್.ನರಸಿಂಹಾಚಾರ್ಯ ಅವರ ಅಧ್ಯಕ್ಷತೆಯಲ್ಲಿ ಬಸವಕಲ್ಯಾಣದಲ್ಲಿ ನಡೆಸಲು ಘೋಷಿಸಲಾಯಿತಂತೆ. ಆದರೆ ಸ್ವಾಗತ ಸಮಿತಿಯಲ್ಲಿದ್ದ ಕೆಲವರು ಡಿ.ಎಲ್.ಎನ್ ಅವರ ಆಯ್ಕೆಯನ್ನು ತೀವ್ರವಾಗಿ ವಿರೋಧಿಸಿದರು. ಡಿ.ಎಲ್.ಎನ್ ತಮ್ಮ ಸಂಶೋಧನಾ ಪ್ರಬಂಧದಲ್ಲಿ, ಸೊನ್ನಲಿಗೆ ಸಿದ್ಧರಾಮ ವೀರಶೈವನೋ ಅಲ್ಲವೋ ಎಂದು ಚರ್ಚಿಸಿದ್ದರು. ಇದು ಬಸವಕಲ್ಯಾಣದ ಸ್ವಾಗತ ಸಮಿತಿಯಲ್ಲಿದ್ದ ಕೆಲವರ ಕೋಪಕ್ಕೆ ಕಾರಣವಾಗಿ, ಸಮ್ಮೇಳನಾಧ್ಯಕ್ಷರ ಬದಲಾವಣೆಗೆ ಪಟ್ಟು ಹಿಡಿದಿದ್ದರು. ಆದರೆ ಆಗ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಬಿ.ಶಿವಮೂರ್ತಿ ಶಾಸ್ತ್ರಿಗಳು ಈ ಒತ್ತಾಯಕ್ಕೆ ಮಣಿಯಲಿಲ್ಲ. ಸಮ್ಮೇಳನ ನಡೆಸುವ ಸ್ಥಳವನ್ನೇ ಬದಲಾಯಿಸಿ, ಬೀದರ್ನಲ್ಲಿ 41ನೇ ಸಾಹಿತ್ಯ ಸಮ್ಮೇಳನ ನಡೆಯುವಂತಾಯಿತು. ಜಾತೀಯತೆಯ ವಿರುದ್ಧ ಪಾಂಡಿತ್ಯವು ಜಯ ಗಳಿಸುವುದಕ್ಕೆ ಕಾರಣರಾದವರು ಬೀದರ್ನ ಸಹನಶೀಲ ಜನ ಎಂದು ‘ಸಂಪಾದಕರ ಡೈರಿ’ಯಲ್ಲಿ ಪತ್ರಕರ್ತ ಬಿ.ವಿ.ವೈಕುಂಠರಾಜು ದಾಖಲಿಸಿದ್ದಾರೆ. ಅವರ ಲೇಖನದ ಕೊನೆಯ ಸಾಲುಗಳು ಈ ರೀತಿ ಇವೆ: ಭಿನ್ನಾಭಿಪ್ರಾಯವನ್ನು ಒಪ್ಪಿಕೊಳ್ಳದ ಸಮಾಜವು ಸುಸ್ಥಿರ ಆಗುವುದು ಹೇಗೆ? ಸಾಹಿತ್ಯ ಅಂದರೆ ನಿಂತ ನೀರಲ್ಲ. ಅದು ನಿತ್ಯ ಹರಿವ ವಿಚಾರದ ಝಳ.