‘ಕಲಿಕಾ ಚೇತರಿಕೆ’ ಕಾರ್ಯಕ್ರಮಕ್ಕೆ ಬೇಕಾದಂತಹ ಬೋಧನಾ ಸಾಮಗ್ರಿಯ ಪೂರೈಕೆಗೆ ಅನುದಾನದ ಕೊರತೆಯಾಗಿರುವ ಸುದ್ದಿ ಓದಿ ಬೇಸರವಾಯಿತು (ಪ್ರ.ವಾ., ಜೂನ್ 30). ಅಲ್ಲದೆ ಕಲಿಕಾ ಚೇತರಿಕೆಯ ಹಾಳೆಗಳನ್ನು ಜೆರಾಕ್ಸ್ ಮಾಡಿಸಲು ಸ್ವತಃ ಶಿಕ್ಷಕರೇ ದಾನಿಗಳ ಬಳಿ ಹಣ ಸಂಗ್ರಹಿಸಬೇಕು ಎಂದು ಸುತ್ತೋಲೆ ಹೊರಡಿಸಿರುವುದು ವಿಷಾದನೀಯ. ಶಿಕ್ಷಕರನ್ನು ಜನಗಣತಿಯಿಂದ ಚುನಾವಣಾ ಕರ್ತವ್ಯದವರೆಗೆ ದುಡಿಸಿಕೊಳ್ಳುತ್ತಿದ್ದಾರೆ. ಈಗ ದಾನಿಗಳನ್ನು ಪತ್ತೆ ಮಾಡುವ ಕೆಲಸವನ್ನೂ ಅವರಿಗೆ ಹೆಚ್ಚುವರಿಯಾಗಿ ಹೊರಿಸಿ, ಅವರ ಬೆನ್ನು ಬಾಗುವಂತೆ ಮಾಡಿರುವುದು ತರವಲ್ಲ. ಪತ್ತೆ ಕಾರ್ಯದಲ್ಲಿ ವಿಫಲರಾದ ಶಿಕ್ಷಕರು ಜೆರಾಕ್ಸ್ಗೆ ಬೇಕಾಗುವ ಹಣವನ್ನು ತಮ್ಮ ಜೇಬಿನಿಂದಲೇ ಭರಿಸಬೇಕಂತೆ!