ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ, ಭಾರತ ಮೂಲದ ಸುಂದರ್ ಪಿಚೈ ಅವರಿಗೆ ಈ ಬಾರಿ ಸಂದಿರುವ ಪದ್ಮಭೂಷಣ ಪ್ರಶಸ್ತಿಯನ್ನು ಸ್ಯಾನ್ಫ್ರಾನ್ಸಿಸ್ಕೊದಲ್ಲಿ ಭಾರತದ ರಾಯಭಾರಿ ಅವರು ಕೊಡಮಾಡಿದ್ದನ್ನು (ಪ್ರ.ವಾ., ಡಿ. 4) ಓದಿ ಬಹಳ ಸಂತಸಪಟ್ಟವರಲ್ಲಿ ನಾನೂ ಒಬ್ಬ. ತಮಿಳುನಾಡಿನ ಒಂದು ಹಳ್ಳಿಯಲ್ಲಿ ಜನಿಸಿ, ಖರಗ್ಪುರದ ಐಐಟಿಯಲ್ಲಿ ಉನ್ನತ ವಿದ್ಯಾಭ್ಯಾಸ ಪೂರೈಸಿದ ಅವರು, ಗೂಗಲ್ ಸಂಸ್ಥೆಯ ಉನ್ನತ ಹುದ್ದೆಯನ್ನು ಅಲಂಕರಿಸಿರುವುದು ಭಾರತೀಯರ ಹೆಮ್ಮೆ. ಇದೇ ತರಹ ನೂರಾರು ಮಂದಿ ಭಾರತದಲ್ಲಿ ಉನ್ನತ ವ್ಯಾಸಂಗ ಮುಗಿಸಿದವರು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಇದಕ್ಕೆ ಕಾರಣ ನಮ್ಮ ಭಾರತದ ವಿದ್ಯೆಯ ಶ್ರೇಷ್ಠ ಮಟ್ಟ. ಇನ್ನಾದರೂ ನಮ್ಮವರು ವಿದೇಶಗಳಿಗೆ ಓದಲು ಹೋಗುವ ವ್ಯಾಮೋಹವನ್ನು ಬಿಡಲಿ. ಎಲ್ಲೇ ಕೆಲಸ ಮಾಡಿದರೂ ಭಾರತಕ್ಕೆ ಗೌರವವನ್ನು ತರಲಿ.