ರಾಜ್ಯದಲ್ಲಿ, ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿದ್ದು, ಕೆಲವರು ಮನೆಗಳನ್ನು ಕಳೆದುಕೊಂಡು ಬೀದಿಪಾಲಾಗಿದ್ದಾರೆ. ನಮ್ಮ ಭಾಗದ ಜೀವನದಿ ಕೃಷ್ಣಾ ಸದ್ಯದ ಮಟ್ಟಿಗೆ ಎರಡು ಅಲಗಿನ ಕತ್ತಿಯಂತಾಗಿದೆ. ಎರಡು ತಿಂಗಳ ಹಿಂದಷ್ಟೇ ಹನಿ ನೀರಿಲ್ಲದೆ ಕಬ್ಬು ಸೇರಿದಂತೆ ಅನೇಕ ಬೆಳೆಗಳನ್ನು ಕಳೆದುಕೊಂಡು ಪರಿತಪಿಸಿ, ನೆರೆಯ ಮಹಾರಾಷ್ಟ್ರದಿಂದ ಕನಿಷ್ಠ ಕುಡಿಯುವ ಉದ್ದೇಶಕ್ಕಾದರೂ ನೀರು ಬಿಡಿಸುವಂತೆ ಜನರು ಬೇಡಿಕೊಂಡರು. ಆದರೆ ಅದನ್ನು ಕೇಳಿಸಿಕೊಳ್ಳಬೇಕಾಗಿದ್ದ ಶಾಸಕರು ಬೆಚ್ಚಗೆ ಮುಂಬೈ ಸೇರಿಕೊಂಡರೆ, ಅಧಿಕಾರಿಗಳು ಜಾಣಕಿವುಡರಾಗಿದ್ದರು. ಆದರೆ ಈಗ ನೆರೆ ರಾಜ್ಯದಲ್ಲಿ ಸುರಿಯುತ್ತಿರುವ ಮಹಾ ಮಳೆಯಿಂದ ಅದೇ ಕೃಷ್ಣಾ ನದಿಯು ರೌದ್ರಾವತಾರ ತಾಳಿದ್ದು, ನೆರೆ ಭೀತಿಯಿಂದ ಜನರು ತಮ್ಮ ಮನೆಮಠ ತೊರೆದು ದನಕರುಗಳೊಂದಿಗೆ ಸುರಕ್ಷಿತ ಸ್ಥಳ ಅರಸಿ ಹೋಗುತ್ತಿದ್ದಾರೆ.