ಈ ವರ್ಷ ಆಷಾಢಮಾಸವು ಕಳೆಗುಂದಿದೆ. ಎಲ್ಲ ವೃತ್ತಿಗಳೂ ಆತಂಕ ಎದುರಿಸುತ್ತಿವೆ. ಪ್ರತಿವರ್ಷ ಆಷಾಢಮಾಸದಲ್ಲಿ ಎಲ್ಲಾ ದೇವಸ್ಥಾನಗಳಲ್ಲಿ ವಿಜೃಂಭಣೆಯಿಂದ ಪೂಜೆ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ದೇವಸ್ಥಾನಕ್ಕೂ ಅರ್ಚಕರಿಗೂ ದೇವಸ್ಥಾನದ ಸುತ್ತಮುತ್ತಲಿನ ರಸ್ತೆ ಬದಿಯ ವ್ಯಾಪಾರಿಗಳಿಗೂ ಒಳ್ಳೆಯ ಆದಾಯ ಬರುತ್ತಿತ್ತು. ರಾಜ್ಯದಾದ್ಯಂತ ದಾನಿಗಳು ಲಕ್ಷಾಂತರ ಮಂದಿಗೆ ಅನ್ನದಾಸೋಹ ನಡೆಸುತ್ತಿದ್ದರು. ಸಾರ್ವಜನಿಕರು ಹರ್ಷಚಿತ್ತರಾಗುತ್ತಿದ್ದರು. ಆದರೆ ಈಗಿನ ಕೊರೊನಾ ಸೋಂಕಿನ ಸಂದರ್ಭದಲ್ಲಿ ಎಲ್ಲರೂ ಧೃತಿಗೆಟ್ಟಿದ್ದಾರೆ. ಅವರ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಆದ್ದರಿಂದ ಹೃದಯವಂತ ದಾನಿಗಳು ಮುಂದೆ ಬಂದು, ಆಷಾಢಮಾಸದಲ್ಲಿ ಖರ್ಚು ಮಾಡುತ್ತಿದ್ದ ಹಣವನ್ನು ಅಗತ್ಯವಿದ್ದವರಿಗೆ ನೀಡಬೇಕು. ಇದರಿಂದ ಅವರ ಔಷಧಿ, ಮಕ್ಕಳ ವಿದ್ಯಾಭ್ಯಾಸ, ದವಸ ಧಾನ್ಯದಂತಹ ಉಪಯೋಗಕರವಾದ ಖರ್ಚಿಗೆ ಸಹಾಯವಾಗುತ್ತದೆ. ಪ್ರತಿಯೊಬ್ಬರೂ ಆಡಂಬರದ ಜೀವನಕ್ಕೆ ಬ್ರೇಕ್ ಹಾಕಿ, ನೊಂದವರಿಗೆ ಸಹಾಯಹಸ್ತ ಚಾಚುವಂತಾಗಲಿ.