ಕಳೆದ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಭಾರತವು ಪಾಕಿಸ್ತಾನದ ಎದುರು ಸೋಲದೇ ಇರಬಹುದು. ಅದು ಭಾರತದ ಸಾಮರ್ಥ್ಯ, ಗೇಮ್ ಪ್ಲಾನ್. ಆದರೆ ಇದೊಂದು ಆಟ, ಇದರಲ್ಲಿ ಸೋಲು ಗೆಲುವು ಸಾಮಾನ್ಯ. ಅದು ಅಂದಿನ ಪಿಚ್ನ ಸ್ಥಿತಿ, ಬ್ಯಾಟಿಂಗ್ ಶಕ್ತಿ, ಕರಾರುವಾಕ್ ಬೌಲಿಂಗ್ ಮೇಲೆ ನಿರ್ಧಾರವಾಗುತ್ತದೆ.
ಅಷ್ಟಕ್ಕೂ ‘ಪಾಕಿಸ್ತಾನದ ಎದುರಿನ ಪಂದ್ಯ ಬೇರೆ ತಂಡಗಳ ಜೊತೆ ಆಡಿದಂತೆಯೇ ಹೊರತು ಅದರಲ್ಲೇನೂ ವಿಶೇಷವಿಲ್ಲ’ ಎಂದು ಸ್ವತಃ ವಿರಾಟ್ ಕೊಹ್ಲಿ ಅವರೇ ಹೇಳಿದ್ದಾರೆ. ಕಳೆದ ಎಪ್ಪತ್ತು ವರ್ಷಗಳಿಂದ ಪಾಕಿಸ್ತಾನವು ಭಯೋತ್ಪಾದನೆಯನ್ನು ಪೋಷಿಸುತ್ತಲೇ ಬಂದಿದೆ. ಇಂತಹ ಹಿಂಸಾತ್ಮಕ ಚಟುವಟಿಕೆಗಳ ಕಾರಣಕ್ಕಾಗಿಯೇ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳು ಪಾಕಿಸ್ತಾನದಲ್ಲಿ ಆಯೋಜಿಸಿದ್ದ ಸರಣಿಯನ್ನು ಆಡಲು ನಿರಾಕರಿಸಿದವು. ಹಿಂದೊಮ್ಮೆ ಶ್ರೀಲಂಕಾ ಕ್ರಿಕೆಟಿಗರ ಮೇಲೆ ಇದೇ ಪಾಕಿಸ್ತಾನದಲ್ಲಿ ಬಾಂಬ್ ದಾಳಿ ನಡೆದಿದ್ದನ್ನು ಮರೆಯುವಂತಿಲ್ಲ.
ಮತ್ತೆ ಈ ಬಾರಿ ವಿಶ್ವಕಪ್ನಲ್ಲಿ ಪಾಕಿಸ್ತಾನ ನಮ್ಮ ದೇಶದ ವಿರುದ್ಧ ಸೆಣಸಲಿದೆ. ಭಾರತ– ಪಾಕಿಸ್ತಾನದ ನಡುವಿನ ಪಂದ್ಯವೆಂದರೆ ಕುತೂಹಲ ಇದ್ದೇ ಇರುತ್ತದೆ. ನಮ್ಮ ದೇಶ ಗೆಲ್ಲಲಿ ಎಂಬ ಕೋಟ್ಯಂತರ ಜನರ ಹಾರೈಕೆಯಿದೆ. ಆದರೆ ಇದೊಂದು ಆಟವಾಗಿರುವುದರಿಂದ ನಾವು ಸಮಚಿತ್ತದಿಂದ ನೋಡೋಣ. ನಮ್ಮ ತಂಡವೇ ಗೆಲ್ಲಲಿ ಎಂದು ಆಶಿಸೋಣ. ಆದರೆ ಒತ್ತಡ ಹಾಕುವುದು ಸಲ್ಲ.