ನಾಳೆ (ಅ. 4) ವಿಶ್ವ ಪ್ರಾಣಿಗಳ ದಿನ. ಸಕಲ ಚರಾಚರ ಜೀವಿಗಳು ನೆಮ್ಮದಿಯಿಂದ, ಸುಖ ಸಂತೋಷದಿಂದ ಬದುಕಿ ಬಾಳಬೇಕೆಂದು ಭಗವಂತ ಸೃಷ್ಟಿಸಿದ ಈ ಭೂಮಿಯಲ್ಲಿ, ಮಾನವನ ಸ್ವಾರ್ಥಲಾಲಸೆಗೆ ಸಿಕ್ಕ ಪ್ರಾಣಿಗಳ ಬದುಕು ನರಕಸದೃಶವಾಗಿದೆ. ಪ್ರಾಣಿ ಸಂರಕ್ಷಣಾ ಕಾನೂನು ಜಾರಿಯಲ್ಲಿದ್ದರೂ ಪ್ರಾಣಿಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಲೇ ಇದೆ. ಬೀದಿ ನಾಯಿಯ ಕಾಟವೆಂದು, ಹೆಣ್ಣುನಾಯಿ ಮರಿ ಹಾಕಿದೆಯೆಂದು ಅವುಗಳನ್ನು ದೂರ ಅಟ್ಟುವುದು, ಕೊಂದು ಹಾಕುವುದನ್ನು ನೋಡಿದಾಗ ಕರುಳು ಹಿಂಡುತ್ತದೆ. ಒಂಟೆತ್ತಿನ ಬಂಡಿಯ ಮೇಲೆ ಹೊರಲಾರದ ಭಾರ ಹೇರಿ, ಆ ಎತ್ತನ್ನು ಹೊಡೆದು ಬಡಿದು ಮುನ್ನಡೆಸುವುದು, ಗೋವುಗಳನ್ನು ಅತ್ಯಂತ ಕಿರಿದಾದ ಜಾಗದಲ್ಲಿ ಕಟ್ಟಿಹಾಕುವುದು, ಜೀವಂತ ಪ್ರಾಣಿಗಳನ್ನು ಪ್ರಯೋಗ ಪಶುಗಳನ್ನಾಗಿಸುವುದು... ಒಂದೇ, ಎರಡೇ? ಮನುಷ್ಯನ ಕ್ರೌರ್ಯಕ್ಕೆ ಎಣೆಯುಂಟೇ?