‘ರಾಜಕಾಲುವೆಯ ಮೇಲೆ ಮನೆಗಳನ್ನು ಕಟ್ಟಿದ್ದಾರೆ, ಅವನ್ನು ತೆರವುಗೊಳಿಸುತ್ತೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುತ್ತಿದ್ದಾರೆ. ಅದೆಲ್ಲ ಸರಿ, ಒಂದು ಮನೆಯನ್ನು ವಾರಗಳಲ್ಲಿ ಕಟ್ಟುವುದು ಸಾಧ್ಯವಿಲ್ಲ. ಮಹಡಿ ಮನೆಗಳನ್ನು ಕಟ್ಟಲಿಕ್ಕಂತೂ ವರ್ಷ ಬೇಕು. ಹೀಗಿರುವಾಗ, ಅಕ್ರಮ ನಿರ್ಮಾಣ ಕಾರ್ಯ ನಡೆಯದಂತೆ ನೋಡಿಕೊಳ್ಳಲು ಆ ಪ್ರದೇಶಕ್ಕೊಬ್ಬ ಸರ್ಕಾರಿ ಅಧಿಕಾರಿ ಇರುತ್ತಾನಲ್ಲ, ಅವ ಏನು ಮಾಡುತ್ತಿದ್ದ? ಕರ್ತವ್ಯಲೋಪ ಎಸಗಿದ ಅಥವಾ ಲಂಚ ಪಡೆದು ಅಕ್ರಮಕ್ಕೆ ಅವಕಾಶ ಮಾಡಿಕೊಟ್ಟ ಆತನಿಗೆ ಏನು ಶಿಕ್ಷೆ? ಅಕ್ರಮಗಳಿಗೆ ಅವಕಾಶ ಮಾಡಿಕೊಡುವವರಿಗೆ ಕಠಿಣ ಶಿಕ್ಷೆ ಕೊಟ್ಟರೆ ಇತರ ಅಧಿಕಾರಿಗಳಿಗೆ ಅದು ಒಂದು ಪಾಠವಾಗಿ, ಮುಂದೆ ಅಕ್ರಮ ನಿರ್ಮಾಣ ಚಟುವಟಿಕೆಗಳೇ ನಿಂತುಹೋಗುವುದಿಲ್ಲವೇ?