ಹೊಳಲ್ಕೆರೆ ತಾಲ್ಲೂಕಿನ ಅಜ್ಜಿ ಕ್ಯಾತನಳ್ಳಿಯಲ್ಲಿ ದೆವ್ವ ಬಿಡಿಸುವುದಾಗಿ ಹೇಳಿ ಬಾಲಕಿಯನ್ನು ಪೂಜಾರಿಯೊಬ್ಬರು ಕೋಲಿನಿಂದ ಹೊಡೆದು ಸಾಯಿಸಿರುವುದನ್ನು ತಿಳಿದು (ಪ್ರ.ವಾ., ಸೆ. 28) ಮನಸ್ಸಿಗೆ ತುಂಬಾ ನೋವಾಯಿತು. ಜನರಲ್ಲಿ ಎಷ್ಟು ಜಾಗೃತಿ ಮೂಡಿಸಿದರೂ ಮತ್ತದೇ ರೀತಿಯ ತಪ್ಪುಗಳು ನಡೆಯುತ್ತಿವೆ.
ಕೆಲವು ಪೂಜಾರಿಗಳು ಮತ್ತು ಮಂತ್ರವಾದಿಗಳು ಜನರಲ್ಲಿ ಇಲ್ಲಸಲ್ಲದ ಭಯ ಮೂಡಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಸರ್ಕಾರವು ಮೂಢನಂಬಿಕೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದರೂ ಅದನ್ನು ಕಟ್ಟುನಿಟ್ಟಾಗಿ ಪಾಲಿಸದಿರುವುದೇ ಇಂತಹ ವಿದ್ಯಮಾನಗಳಿಗೆ ಕಾರಣ. ಕಾಯ್ದೆ ಜಾರಿಗೊಳಿಸಿದಾಗಿನಿಂದಲೂ ಎಷ್ಟು ಜನರಿಗೆ ಶಿಕ್ಷೆ ನೀಡಲಾಗಿದೆ ಎನ್ನುವ ಬಗ್ಗೆ ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಲಿ.