ಅವಕಾಶಗಳಿಗಾಗಿ ಹಾತೊರೆಯವ ಅನೇಕರಲ್ಲಿ ಬೆಂಗಳೂರು ಕೇಂದ್ರಿತ ಸಾಂಸ್ಕೃತಿಕ ಹಿಡಿತದ ಬಗ್ಗೆ ಅಸಮಾಧಾನವಿದೆ. ಬಹಳಷ್ಟು ಕವಿಗಳು, ಕಲಾವಿದರು, ಸಾಧಕರು ‘ನಮ್ಮನ್ನು ಯಾರೂ ಗಮನಿಸಲಾರರೇನೋ’ ಎಂಬ ಆತಂಕದಲ್ಲಿ ನಿವೃತ್ತಿ ಆದದ್ದೇ ತಡ ಬೆಂಗಳೂರಿನತ್ತ ಹೊರಟುಬಿಡುತ್ತಾರೆ. ಸ್ಥಳೀಯವಾದ ಗುಂಪುರಾಜಕಾರಣ, ರಾಜಕೀಯ ವ್ಯಕ್ತಿಗಳ ಶಿಫಾರಸು ಹಿಡಿದುಕೊಂಡು ಎಡತಾಕುವ ಹಿರಿಯ ಜೀವಗಳನ್ನು ಕಂಡಾಗ ಮರುಕವೆನಿಸುತ್ತದೆ. ತಮ್ಮ ಬದುಕನ್ನೇ ಕೃತಿಯಾಗಿಸಿಕೊಂಡು ಎಲ್ಲೋ ಎಲೆಮರೆಯ ಧ್ಯಾನದಲ್ಲಿ ಇದ್ದುಬಿಡುವ ಹಿರಿಯ ಜೀವಗಳನ್ನು ಗುರುತಿಸಿ ಪ್ರಶಸ್ತಿ ಕೊಡುತ್ತಾರೆಯೇ...? ಅದಕಾಗಿ ನಾವು ಅಧಿಕಾರಶಾಹಿಯ ಸಮೀಪದಲ್ಲಿ ಸುಳಿದಾಡುತ್ತಿರಬೇಕು ಎಂಬಂತೆ ವರ್ತಿಸುವ ಹಲವರ ನಡುವೆ ಸದ್ದಿಲ್ಲದೆ ಸಾಧನೆ ಮಾಡಿದ ಹಿರಿಯರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ.