ಕೆಲವರು ತಾವು ಪ್ರತಿನಿಧಿಸುವ ಕ್ಷೇತ್ರಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುವುದು, ಸದನಕ್ಕೆ ಮುಖ್ಯಮಂತ್ರಿ ಆಗಮಿಸಿದಾಗ ಖಾಸಗಿ ಬೇಡಿಕೆಗಳ ಪಟ್ಟಿಯೊಂದಿಗೆ ಅವರ ಕುರ್ಚಿಯ ಬಳಿ ಸಾಲಾಗಿ ನಿಲ್ಲುವುದು, ಶೂನ್ಯ ವೇಳೆಯಲ್ಲಿ ಇರುವ ಅವಕಾಶ ಬಳಸಿಕೊಳ್ಳದೆ ಪಕ್ಕದ ಆಸನದ ಸದಸ್ಯರೊಂದಿಗೆ ಹರಟೆ ಹೊಡೆಯುವುದು, ಸದನ ಸಮಾವೇಶಗೊಂಡಾಗ ಇರಬೇಕಾದ ಶಿಸ್ತು ಪಾಲಿಸದಿರುವುದು, ಆದರೆ ಇದಕ್ಕೆ ತದ್ವಿರುದ್ಧ ಎನ್ನುವಂತೆ ಕೆಲ ಸದಸ್ಯರು ಪೂರ್ವ ತಯಾರಿ ಮಾಡಿಕೊಂಡು ಸದನದಲ್ಲಿ ಚರ್ಚೆಗೆ ಸಿದ್ಧರಾಗಿ ಬಂದಾಗ, ಅವರಿಗೆ ಚರ್ಚೆಗೆ ಅವಕಾಶವೇ ಸಿಗದೆ ನಿರಾಸೆ ಹೊಂದುವುದು ಸಹಜ ಎನ್ನುವಂತಾಗಿದೆ. ಇಂತಹ ಪರಿಸ್ಥಿತಿಗೆ ಹೊರತಾಗದ ಈ ಬಾರಿಯ ಅಧಿವೇಶನವೂ ಅತ್ತ ಪೂರ್ಣ ಸಿಹಿಯೂ ಅಲ್ಲದ ಇತ್ತ ಪೂರ್ಣ ಕಹಿಯೂ ಅಲ್ಲದ ಯುಗಾದಿ ಹಬ್ಬದ ಬೇವು ಬೆಲ್ಲದಂತೆ ಮುಕ್ತಾಯಗೊಂಡಿತು!