ಆಹಾರ ಪದಾರ್ಥ ವಿತರಣೆಯಲ್ಲಿ ಉಂಟಾಗಬಹುದಾದ ದುರುಪಯೋಗ ತಡೆಗಟ್ಟಲು ತಂದಿರುವ ಈ ಆಧುನಿಕ ವ್ಯವಸ್ಥೆ ನಿಜವಾಗಿಯೂ ಇವುಗಳನ್ನು ಪಡೆಯಲು ಅರ್ಹವಾದ ಕುಟುಂಬಗಳನ್ನು ಅಭದ್ರತೆಯತ್ತ ದೂಡುತ್ತಿದೆ. ರೇಷನ್ ಪಡೆಯುವ ಅನಿವಾರ್ಯದಿಂದ, ದುಡಿಯುವ ವರ್ಗ ಯಾವಾಗಲೂ ತಮ್ಮ ಕೈ ಬೆರಳುಗಳ ಸಂರಕ್ಷಣೆಯಲ್ಲಿಯೇ ತೊಡಗಿರುವುದು ಸಾಧ್ಯವಿಲ್ಲ. ಬೆರಳಚ್ಚಿನ ಜೊತೆಗೆ ಪರ್ಯಾಯ ವ್ಯವಸ್ಥೆಯೊಂದರ ಅವಶ್ಯಕತೆ ಖಂಡಿತ ಇದೆ. ಸರ್ಕಾರ ಕೊಡುತ್ತಿರುವ ಅನ್ನವು ಅರ್ಹ ಶ್ರಮಿಕ ವರ್ಗಕ್ಕೆ ಸಲೀಸಾಗಿ ತಲುಪುತ್ತಿಲ್ಲ ಎಂದರೆ, ಆ ಯೋಜನೆ ಹೇಗೆ ಸಾರ್ಥಕತೆ ಪಡೆದೀತು?