ದಶಕಗಳ ಹಿಂದೆ ಪಶ್ಚಿಮ ಬಂಗಾಳವನ್ನು ‘ಬಂದ್’ಗಳ ರಾಜ್ಯ ಎಂದು ಹೇಳಲಾಗುತ್ತಿತ್ತು. ಆ ರಾಜ್ಯದಲ್ಲಿ ‘ಬಂದ್’ ವಿರುದ್ಧ ‘ಬಂದ್’ಗೆ ಕರೆ ನೀಡಲಾಗುತ್ತದೆ ಎಂದು ಲೇವಡಿ ಮಾಡಲಾಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಈ ದೌರ್ಭಾಗ್ಯ ಕರ್ನಾಟಕಕ್ಕೆ ಅಂಟಿಕೊಂಡಂತಿದೆ. ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್) ಪುಂಡಾಟಿಕೆ ವಿರುದ್ಧದ ಪ್ರತಿಭಟನೆಗೆ ಅರ್ಥವಿದ್ದರೂ ಜನಜೀವನವನ್ನು ಅಸ್ತವ್ಯಸ್ತಗೊಳಿಸಿ, ಕೊರೊನಾದಿಂದಾಗಿ ಎರಡು ವರ್ಷ ಗಳಿಂದ ಆರ್ಥಿಕ ಸಂಕಷ್ಟದಲ್ಲಿರುವ ಜನರ ಬದುಕನ್ನು ಇನ್ನಷ್ಟು ಹೈರಾಣಗೊಳಿಸುವುದು ಯಾವ ನ್ಯಾಯ? ಸದಾ ಕಿರುಕುಳ ನೀಡುವ ಎಂಇಎಸ್ ಅನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿರುವುದರ ವಿರುದ್ಧ ವಿಧಾನಸೌಧದ ಮುಂದೆ ಶಾಂತಿಯುತ ಪ್ರತಿಭಟನೆ ಮಾಡಬೇಕೇ ವಿನಾ ರಾಜ್ಯವನ್ನು ಬಂದ್ ಮಾಡಿ ಜನಸಾಮಾನ್ಯರಿಗೆ ತೊಂದರೆ ನೀಡುವುದಲ್ಲ.