‘ಎಲ್ಲಿಯವರೆಗೆ ಹೆದರುವವರು ಇರುತ್ತಾರೋ ಅಲ್ಲಿಯವರೆಗೆ ಹೆದರಿಸುವವರು ಇದ್ದೇ ಇರುತ್ತಾರೆ!’ ಎಂದು ಮಹಾಭಾರತದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಹೇಳುವ ಮಾತು ಪ್ರಸ್ತುತವೆನಿಸುತ್ತದೆ. ಕೋಲಾರ ಜಿಲ್ಲೆಯ ನಂಗಲಿ ಭಾಗದಲ್ಲಿ ನಡೆದಿರುವ ಪ್ರಕರಣದಿಂದ ಈ ಮಾತು ನೆನಪಾಯಿತು. ದಲಿತ ಯುವಕನು ಒಕ್ಕಲಿಗ ಯುವಕರ ಬೈಕ್ ಅನ್ನು ಹಿಂದಿಕ್ಕಿದ್ದಕ್ಕೆ ಆ ಜಾತಿಯ ನಾಲ್ವರು ಯುವಕರು ದಲಿತ ಯುವಕನನ್ನು ಮರಕ್ಕೆ ಕಟ್ಟಿ ಥಳಿಸಿದ್ದಾರೆ, ಇದರಿಂದ ಮನನೊಂದಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಇದೆಂತಹ ವಿಪರ್ಯಾಸ. ಅದೇ ಯುವಕ ಆ ನಾಲ್ವರನ್ನು ಧೈರ್ಯದಿಂದ ಎದುರಿಸಿ, ಜಾತಿ ನಿಂದನೆ ಮಾಡಿದವರಿಗೆ ಕಾನೂನಾತ್ಮಕ ಶಿಕ್ಷೆ ಕೊಡಿಸಿದ್ದರೆ ಆತ ಇತರ ದಲಿತರಿಗೆ ಮಾದರಿಯಾಗುತ್ತಿದ್ದ. ಅದು ಬಿಟ್ಟು ಅವಮಾನವಾಯಿತು ಎಂದು ಪ್ರಾಣ ಬಿಟ್ಟರೆ ಏನು ಸಾಧಿಸಿದಂತಾಯಿತು?