ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯ ಪ್ರಕರಣದ ದೃಶ್ಯಾವಳಿ ವೀಕ್ಷಿಸಿದಾಗ, ನನಗೆ ಆಶ್ಚರ್ಯ ಹಾಗೂ ವಿಷಾದ ಎರಡೂ ಉಂಟಾಯಿತು. ಮುಸ್ಲಿಂ ಸಹಪಾಠಿಯೊಬ್ಬನನ್ನು ಶಿಕ್ಷಕರು ಭಯೋತ್ಪಾದಕನಿಗೆ ಹೋಲಿಸಿದಾಗ, ಮುಂದಿನ ಸಾಲಿನಲ್ಲಿ ಕೂತವರಿಂದಾಗಲಿ, ಪಕ್ಕದಲ್ಲಿದ್ದ ಯುವತಿಯಿಂದಾಗಲಿ ಯಾವುದೇ ರೀತಿಯ ಪ್ರತಿಕ್ರಿಯೆ ಕಾಣಿಸಲಿಲ್ಲ. ತತ್ಕ್ಷಣ ಉಳಿದ ಹುಡುಗರು ವಿರೋಧ ವ್ಯಕ್ತಪಡಿಸದಿದ್ದುದು ಯಾವ ಕಾರಣಕ್ಕಾಗಿ? ಸರ್ವ ಮತ, ಜಾತಿಯವರು ಕೂಡಿ ಕಲಿಯುವ ಶಿಕ್ಷಣ ಸಂಸ್ಥೆಗಳಲ್ಲಿ, ಜೊತೆಯಲ್ಲಿ ಕಲಿಯುವ ಒಬ್ಬರಿಗೆ, ಕಲಿಸುವ ಗುರುಗಳೇ ಹೀಗೆ ನಿಂದನೆ ಮಾಡಿದಾಗ, ವಿದ್ಯಾರ್ಥಿ ಸಮೂಹದ ವಿವೇಚನೆ ಎಲ್ಲಿ ಮಾಯವಾಯಿತು?