ಕೊರೊನಾ ಸೋಂಕಿನ ವಿರುದ್ಧ ವೈದ್ಯರು, ಶುಶ್ರೂಷಕಿಯರು, ಆಶಾ ಕಾರ್ಯಕರ್ತೆಯರು ನಿರಂತರವಾಗಿ ಹೋರಾಡುತ್ತಿದ್ದಾರೆ. ಗರ್ಭಿಣಿಯಾಗಿದ್ದರೂ ರಜೆ ತೆಗೆದುಕೊಳ್ಳದೆ ಕಾರ್ಯನಿರ್ವಹಿಸುತ್ತಿರುವ ಮತ್ತು 15 ದಿನಗಳಿಂದ ಮನೆಗೇ ಹೋಗದೆ ಶ್ರಮಿಸುತ್ತಿರುವ ಶುಶ್ರೂಷಕಿಯರಿಗೆ ಖುದ್ದು ಮುಖ್ಯಮಂತ್ರಿಯೇ ಕರೆ ಮಾಡಿ ಧೈರ್ಯ ತುಂಬಿದ್ದು ಶ್ಲಾಘನೀಯ. ಆದರೆ ಕಳೆದ ಮೂರು ವರ್ಷಗಳಿಂದ ಶುಶ್ರೂಷಕಿ ವರ್ಗಕ್ಕೆ ಗುತ್ತಿಗೆ ಪದ್ಧತಿಯನ್ನು ಸರ್ಕಾರವು ಅನುಸರಿಸುತ್ತಿದೆ. ಖಾಲಿ ಇರುವ ಎಲ್ಲಾ ಶುಶ್ರೂಷಕಿ ಹುದ್ದೆಗಳನ್ನು ಭರ್ತಿ ಮಾಡಿದರೆ, ಈ ವರ್ಗಕ್ಕೆ ನಿಜವಾದ ಧೈರ್ಯ ತುಂಬಿದಂತೆ ಆಗುತ್ತದೆ. ಸರ್ಕಾರಿ ಆಸ್ಪತ್ರೆಗೆ ಚೈತನ್ಯವೂ ಸಿಗುತ್ತದೆ.