ನಾವು ಬಾಲ್ಯದಲ್ಲಿದ್ದಾಗ ಹೊಲಗಳಲ್ಲಿ ಹಿರಿಯರು ಕೆಲಸ ಮಾಡುವ ವೇಳೆ ತೋಳ, ಕಪ್ಪಲು ನರಿಗಳು ಸದ್ದಿಲ್ಲದೆ ಬಂದು ಮೇಕೆ-ಕುರಿ-ಕೋಳಿಗಳನ್ನು ಲಪಟಾಯಿಸುತ್ತಿದ್ದದ್ದು ಸಾಮಾನ್ಯ ಸಂಗತಿಯಾಗಿತ್ತು. ಆ ಪ್ರಾಣಿಗಳೇನಾದರೂ ಗಾಬರಿಯಿಂದ ಸದ್ದು ಮಾಡಿದರೆ ಮನೆಯವರು, ಆಳುಗಳೆಲ್ಲ ಒಟ್ಟಾಗಿ ಕಿರುಚುತ್ತಾ ಅವುಗಳನ್ನು ಅಟ್ಟಿಸಿಕೊಂಡು ಹೋಗುತ್ತಿದ್ದದ್ದು ಈಗ ನೆನಪು ಮಾತ್ರ. ಬೇಟೆ ತಪ್ಪಿದ ದಿನ ರಾತ್ರಿಯ ವೇಳೆಯಲ್ಲಿ ಬಂದು ತೋಟದ ಮನೆಯ ಸುತ್ತ ಹೊಂಚು ಹಾಕಿ ಹೋಗಿದ್ದನ್ನು, ಬೆಳಿಗ್ಗೆ ಎದ್ದಾಗ ಹಿರಿಯರು ಅವುಗಳ ಹೆಜ್ಜೆ ಗುರುತುಗಳನ್ನು ತೋರಿಸಿ ಹೇಳುತ್ತಿದ್ದರು.