ಭದ್ರಾ ಜಲಾಶಯದಿಂದ ವಾಣಿವಿಲಾಸ ಸಾಗರಕ್ಕೆ ಹತ್ತು ಟಿಎಂಸಿ ಅಡಿ ನೀರು ಹರಿಸಲು ಆಗ್ರಹಿಸಿ ಮುಖ್ಯಮಂತ್ರಿಗೆ ಪತ್ರ ಬರೆದಿರುವುದಾಗಿ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರು ತಿಳಿಸಿರುವುದು ವರದಿಯಾಗಿದೆ. ಇದೊಂದು ಆಶಾದಾಯಕ ಹೆಜ್ಜೆ. ಸತತ ಬರಗಾಲಕ್ಕೆ ತುತ್ತಾಗುತ್ತಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಸಾವಿರಾರು ಅಡಿ ಕೊಳವೆಬಾವಿ ಕೊರೆದರೂ ಹನಿ ನೀರಿಲ್ಲದೆ ಭೂಮಿ ಬೆಂಗಾಡಾಗಿದೆ. ಈಗ ಭದ್ರೆಯಿಂದ ಬರುವ ಕೇವಲ ಎರಡೇ ಎರಡು ಟಿಎಂಸಿ ಅಡಿ ನೀರಿಗಾಗಿ ಜಿಲ್ಲೆಯ ಚಳ್ಳಕೆರೆ, ಹಿರಿಯೂರು, ಮೊಳಕಾಲ್ಮುರು, ಚಿತ್ರದುರ್ಗ ತಾಲ್ಲೂಕುಗಳ ಶಾಸಕರು, ರೈತರು, ಇತರ ಸಂಘಟನೆಗಳ ಪ್ರತಿನಿಧಿಗಳು ಪರಸ್ಪರ ಕಾದಾಡುತ್ತಾರೆ.