ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆ ಜನಪ್ರತಿನಿಧಿಯಾದವರಿಗೆ ಶೋಭೆ ತರುವುದಿಲ್ಲ.ಸ್ವಾಮೀ ಸಂಸದರೆ, ಶಾಲೆಗಳಲ್ಲಿ ಓದಿದವರು ಅಥವಾ ಪದವಿ ಪಡೆದವರು ಮಾತ್ರ ಬುದ್ಧಿವಂತರಲ್ಲ. ಶಾಲಾ ಮೆಟ್ಟಿಲು ಹತ್ತದ ಅನೇಕರು ಮಹಾ ಸಾಧನೆಗಳನ್ನು ಮಾಡಿದ್ದಾರೆ. ನಮ್ಮ ದೈನಂದಿನ ಜೀವನ ಮುಂದಕ್ಕೆ ಸಾಗಲು ಪಂಕ್ಚರ್ ಹಾಕುವವರೂ ಬೇಕು. ಅವರಂತೆಯೇ ಬಡಗಿ, ದರ್ಜಿ, ಮಡಿವಾಳ, ಗಾರೆ ಕೆಲಸದವರು, ಕೂಲಿಕಾರರು, ಪೌರಕಾರ್ಮಿಕರು ಎಲ್ಲರೂ ಬೇಕು. ಯಾವುದೇ ವೃತ್ತಿ ಕೀಳಲ್ಲ. ಹೊಟ್ಟೆಪಾಡಿಗಾಗಿ ತಮಗೆ ತಿಳಿದ ಕೆಲಸ ಮಾಡುವ ಇವರೆಲ್ಲ ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಬ್ಯಾಂಕುಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿ ದೇಶ ಬಿಟ್ಟು ಓಡಿಹೋದವರ ಪಟ್ಟಿಯಲ್ಲಿ ಪಂಕ್ಚರ್ ಹಾಕುವವರು ಇಲ್ಲ ಎಂಬುದು ಗಮನದಲ್ಲಿರಲಿ.ಸಂಸದರಾದವರಿಗೆ ಮಾತಿನ ಮೇಲೆ ನಿಗಾ ಇರಬೇಕು. ಆ ಕ್ಷಣದ ಚಪ್ಪಾಳೆಗೆ ಮಾರುಹೋದರೆ, ವ್ಯಕ್ತಿತ್ವಕ್ಕೆ ಮಸಿ ಅಂಟುತ್ತದೆ.