ಯಾತ್ರೆ ಸಾಗದ ಜಿಲ್ಲೆಗಳಲ್ಲಿ ಎರಡು ವಾರಗಳ ಅಂತರದಲ್ಲಿ ಕನಿಷ್ಠ ಐದು ದಿನಗಳ ಕಾಲ ಜಿಲ್ಲಾ ಕಾಂಗ್ರೆಸ್ಸಿಗರು ‘ಭಾರತ್ ಜೋಡೊ’ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಬೇಕು. ಆಯಾ ಜಿಲ್ಲೆಯ ವಿವಿಧ ಪ್ರಜಾಸತ್ತಾತ್ಮಕ ಸಂಘಟನೆಗಳು ಇದರಲ್ಲಿ ಒಳಗೊಳ್ಳುವಂತೆ ಮಾಡಬೇಕು. ಈ ಸಂಘಟನೆಗಳ ನಿರೀಕ್ಷೆಗಳೇನು, ಕಾರ್ಯಸೂಚಿಯೇನು ಎಂಬುದನ್ನು ಅರಿಯಬೇಕಾಗಿದೆ. ಈ ಮೂಲಕ ಆಯಾ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆಯೂ ಒಟ್ಟಾರೆ ರಾಷ್ಟ್ರೀಯ ಸಮಸ್ಯೆಗಳ ಬಗ್ಗೆಯೂ ಒಂದು ಮಹಾವೇದಿಕೆಯನ್ನು ಸೃಷ್ಟಿಸಬಹುದು. ಸೃಷ್ಟಿಸಬೇಕಿದೆ. ಇದರಲ್ಲಿ ಉದಾಸೀನ ತೋರಿ, ಚುನಾವಣಾ ಹಪಹಪಿಗಷ್ಟೇ ಜಿಲ್ಲಾ ಕಾಂಗ್ರೆಸ್ಸಿಗರು ಸೀಮಿತವಾದರೆ, ರಾಹುಲ್ ಅವರು ಎದುರಿಸಬಯಸುತ್ತಿರುವ ವಿಭಜಕ ಶಕ್ತಿಗಳನ್ನು ಸ್ಥಳೀಯವಾಗಿ ಎದುರಿಸಿ ಸೋಲಿಸುವುದು ಸಾಧ್ಯವೇ ಇಲ್ಲ. ಸಂಘಟನೆಗಳೂ ತಮ್ಮ ತಮ್ಮ ಜಿಲ್ಲೆಗಳ ಕಾರ್ಯಕರ್ತರನ್ನು ಈ ಸಂವಾದಕ್ಕೆ ಅಣಿಗೊಳಿಸಬೇಕಿದೆ.