ಹಳ್ಳಿಗಾಡಿನ ಕಡೆಯಿಂದ ಅಲ್ಪಸ್ವಲ್ಪ ವಿದ್ಯಾವಂತ, ಅವಿದ್ಯಾವಂತ ಜನ ಪಟ್ಟಣಕ್ಕೆ ಬಂದದ್ದೇ ಜಾಸ್ತಿ. ಈ ಬೃಹತ್ ಶಹರಗಳು ತಮ್ಮ ಕಬಂಧ ಬಾಹುಗಳಿಂದ ಬಂಧಿಸಿ ಅನ್ನ, ಅಕ್ಷರ, ಆರೋಗ್ಯ, ಆಶ್ರಯಗಳನ್ನೇ ತಕ್ಕಮಟ್ಟಿಗೆ ಸಹಸ್ರ ಸಹಸ್ರ ಜನಕ್ಕೆ ನೀಡಿದ್ದು ಸುಳ್ಳಲ್ಲ. ಅವರವರ ಆಶೋತ್ತರಗಳಿಗೆ ಅನುಗುಣವಾಗಿ ಅಲ್ಲದಿದ್ದರೂ ಅವರವರ ಯೋಗ್ಯತಾನುಸಾರ ಅವರೆಲ್ಲರೂ ತಮ್ಮನ್ನು ತಾವು ಇಲ್ಲಿ ತೊಡಗಿಸಿಕೊಂಡಿದ್ದರು. ಇಲ್ಲಿ ಕೊಂಚಮಟ್ಟಿಗೆ ‘ಆನಂದದ ಜಿಂದಗಿ’ಯನ್ನೇ ದಕ್ಕಿಸಿಕೊಂಡಿದ್ದರು. ಇಂಥ ಸನ್ನಿವೇಶಕ್ಕೆ ಧುತ್ತೆಂದು ಎರಗಿದ್ದು ಕೊರೊನಾ ಸೋಂಕು. ಆ ಆಕ್ರಮಣಕ್ಕೆ ತನ್ಮೂಲಕ ಸಂಭವಿಸುತ್ತಿರುವ ಸಾವುಗಳಿಗೆ ತತ್ತರಿಸಿದರು ನಮ್ಮ ಜನ.