ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಜನ ಸುಮ್ಮನೆ ಯಾಕೆ ಗುಳೆ ಹೋಗುತ್ತಾರೆ?

Last Updated 5 ಮೇ 2021, 19:30 IST
ಅಕ್ಷರ ಗಾತ್ರ

ಸಾಮಾನ್ಯ ಜನ ಸುಮ್ಮ ಸುಮ್ಮನೆ ಯಾಕೆ ಗುಳೆ ಹೋಗುತ್ತಾರೆ?– ಪ್ರತೀ ಸರ್ಕಾರವೂ ಈ ಪ್ರಶ್ನೆಯನ್ನು ತುರ್ತಾಗಿ, ಪ್ರಾಮಾಣಿಕವಾಗಿ ಆಂತರ್ಯದಲ್ಲಿ ಕೇಳಿಕೊಳ್ಳಬೇಕಾಗಿದೆ. ಕಳೆದ ವರ್ಷವೂ ಕೊರೊನಾ ಧುತ್ತೆಂದು ಎರಗಿದಾಗ ಇಂಥದ್ದೇ ಪ್ರಶ್ನೆ ಉದ್ಭವಿಸಿತ್ತು. ಗ್ರಾಮಾಂತರ ಪ್ರದೇಶಗಳಿಂದ ಕೆಲಸ ಹುಡುಕಿಕೊಂಡು ಬಂದ ಜನ ತಮ್ಮ ಹೊಟ್ಟೆಪಾಡಿಗಾಗಿ ನಗರಾಂತರ್ಗತ ಜೀವನದ ಕ್ಲಿಷ್ಟಕರ ವಿಷಮ ಸನ್ನಿವೇಶಗಳಿಗೆ ಹೊಂದಿಕೊಂಡು ಬದುಕಿನ ನಿರ್ವಹಣೆ ಮಾಡುತ್ತಾ ಹೇಗೆ ಹೇಗೋ ಮುಂದು ಸಾಗಿದ್ದರು. ಇಂಥ ಪ್ರಶಾಂತವಾದ ಮಾಮೂಲಿನ ಪರಿಸರಕ್ಕೆ ಕಂಡರಿಯದ ಕೇಳರಿಯದ ಸೋಂಕೊಂದು ಧುತ್ತೆಂದು ಬಂದು ಈಗ ತಲ್ಲಣ. ಉಗುಳುವ ಹಾಗಿಲ್ಲ; ನುಂಗುವ ಹಾಗೂ ಇಲ್ಲ.

ಹಳ್ಳಿಗಾಡಿನ ಕಡೆಯಿಂದ ಅಲ್ಪಸ್ವಲ್ಪ ವಿದ್ಯಾವಂತ, ಅವಿದ್ಯಾವಂತ ಜನ ಪಟ್ಟಣಕ್ಕೆ ಬಂದದ್ದೇ ಜಾಸ್ತಿ. ಈ ಬೃಹತ್ ಶಹರಗಳು ತಮ್ಮ ಕಬಂಧ ಬಾಹುಗಳಿಂದ ಬಂಧಿಸಿ ಅನ್ನ, ಅಕ್ಷರ, ಆರೋಗ್ಯ, ಆಶ್ರಯಗಳನ್ನೇ ತಕ್ಕಮಟ್ಟಿಗೆ ಸಹಸ್ರ ಸಹಸ್ರ ಜನಕ್ಕೆ ನೀಡಿದ್ದು ಸುಳ್ಳಲ್ಲ. ಅವರವರ ಆಶೋತ್ತರಗಳಿಗೆ ಅನುಗುಣವಾಗಿ ಅಲ್ಲದಿದ್ದರೂ ಅವರವರ ಯೋಗ್ಯತಾನುಸಾರ ಅವರೆಲ್ಲರೂ ತಮ್ಮನ್ನು ತಾವು ಇಲ್ಲಿ ತೊಡಗಿಸಿಕೊಂಡಿದ್ದರು. ಇಲ್ಲಿ ಕೊಂಚಮಟ್ಟಿಗೆ ‘ಆನಂದದ ಜಿಂದಗಿ’ಯನ್ನೇ ದಕ್ಕಿಸಿಕೊಂಡಿದ್ದರು. ಇಂಥ ಸನ್ನಿವೇಶಕ್ಕೆ ಧುತ್ತೆಂದು ಎರಗಿದ್ದು ಕೊರೊನಾ ಸೋಂಕು. ಆ ಆಕ್ರಮಣಕ್ಕೆ ತನ್ಮೂಲಕ ಸಂಭವಿಸುತ್ತಿರುವ ಸಾವುಗಳಿಗೆ ತತ್ತರಿಸಿದರು ನಮ್ಮ ಜನ.

ಈ ವಿಪತ್ಕಾಲಕ್ಕೆ ಸರ್ಕಾರ ಅನಿವಾರ್ಯವಾಗಿ ಕಳೆದ ವರ್ಷ ಲಾಕ್‌ಡೌನ್‌ ಮಾಡಬೇಕಾಯಿತು. ಈಗಲೂ ಲಾಕ್‌ಡೌನ್ ಪದ ಬಳಸದೇ ಹೋದರೂ ವಿಧಿಸಿರುವ ನಿರ್ಬಂಧಗಳು ಲಾಕ್‌ಡೌನ್‌ನಷ್ಟೇ ಬಿಗಿಯಾಗಿವೆ. ಇದರಿಂದ ಶ್ರೀಸಾಮಾನ್ಯರ ಬದುಕಿನ ದುಡಿಮೆಗೆ ಪೆಟ್ಟು ಬಿತ್ತು. ಕೂಲಿನಾಲಿ ಮಾಡಿ ಬದುಕಲು ಜನರ ವ್ಯಾವಹಾರಿಕ ಬದುಕಿಗೇ ಬೀಗ ಬಿದ್ದಿದೆ.

ಇಂಥ ಅಸಾಮಾನ್ಯ ಸನ್ನಿವೇಶದ ವಿಕಟ ಸಂದರ್ಭದಲ್ಲಿ ಮಾಡುವುದೇನಿದೆ? ಹೊಟ್ಟೆ ಕೇಳಬೇಕಲ್ಲ. ನವ್ಯಕವಿ ಪ್ರೊ. ಗೋಪಾಲಕೃಷ್ಣ ಅಡಿಗರು ಹೇಳಿರುವಂತೆ ‘ಹೊಟ್ಟೆಯೇ ಕೇಂದ್ರವಾಗಿದೆ ನರನ ಜೀವಿತಕ್ಕೆ’. ಬಡವರಿಗೆ ದುಡಿಮೆಗೆ ಅವಕಾಶಗಳಿಲ್ಲ. ಎಲ್ಲಿಗೆ ಹೋಗಬೇಕು?

ಪ್ರೊ. ದೊಡ್ಡರಂಗೇಗೌಡ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT