ಹಾಗೆಯೇ ನಾಟಕೋತ್ಸವ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮೂರು ದಿನ ಸತತವಾಗಿ ಕಾಯ್ದಿರಿಸಲು ತಾಂತ್ರಿಕ ತೊಂದರೆ ಇದೆ. ಆನ್ಲೈನ್ ಮೂಲಕ ಕಾಯ್ದಿರಿಸುವ ವ್ಯವಸ್ಥೆ ಸರಿಯಾದ ನಿರ್ಧಾರವಿರಬಹುದು, ಪಾರದರ್ಶಕತೆಗೂ ಅನುವಾಗಿಸಬಹುದು. ಆದರೆ, ಈಗ ರಂಗಮಂದಿರಗಳನ್ನು ಕಾಯ್ದಿರಿಸಿರುವ ಕಾರ್ಯಕ್ರಮಗಳನ್ನು ಗಮನಿಸಿದರೆ, ಮುಖ್ಯವಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ, ನೃತ್ಯ, ಗಾಯನಗಳಿಗಿಂತ ಇತರೇ ಕಾರ್ಯಕ್ರಮಗಳು ಹೆಚ್ಚಾಗಿವೆ. ಇನ್ನೊಂದು ಸಂಗತಿ, ಸದ್ಯದಲ್ಲೇ ಕಲಾಗ್ರಾಮ ಸಮುಚ್ಚಯವನ್ನು ಖಾಸಗಿ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಲಾಗುವುದೆಂಬ ಸುದ್ದಿ ಕಲಾ ವಲಯದಲ್ಲಿ ಹರಡಿದೆ. ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು.