ಗಾಂಧೀಜಿ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರ ಮಾತ್ರವಲ್ಲ, ಅದಕ್ಕೂ ಮೊದಲು ದಕ್ಷಿಣ ಆಫ್ರಿಕಾದಲ್ಲಿ ನಾಗರಿಕ ಹಕ್ಕುಗಳಿಗಾಗಿ ಚಳವಳಿ ನಡೆಸಿ ವಿಶ್ವದ ಗಮನ ಸೆಳೆದವರು. ಭಾರತದಲ್ಲಿ ರೈತರು ಮತ್ತು ಕಾರ್ಮಿಕರ ಪರವಾಗಿ ಚಳವಳಿ ಮಾಡಿದವರು. ಅಹಿಂಸಾತ್ಮಕ ಹೋರಾಟದಿಂದ ಗೆಲುವು ಸಾಧಿಸಬಹುದು ಎಂಬುದನ್ನು ವಿಶ್ವದಲ್ಲೇ ಮೊದಲ ಬಾರಿಗೆ ತೋರಿಸಿಕೊಟ್ಟವರು. ಅವರ ಸರಳತೆಯು ವಿಶ್ವದ ಹಲವು ನಾಯಕರಿಗೆ ಮಾದರಿಯಾಗಿದೆ. ಅವರ ಚಿಂತನೆ, ತತ್ವ, ಆದರ್ಶಗಳನ್ನು ಹಲವು ದೇಶಗಳು ಅಳವಡಿಸಿಕೊಂಡಿವೆ. ಹೀಗಾಗಿ ಗಾಂಧೀಜಿ ‘ವಿಶ್ವರತ್ನ’ವೇ ಆಗಿದ್ದಾರೆ.