ಪ್ರಾಧಿಕಾರವೇ ಮಾಹಿತಿ ಕೈಪಿಡಿಯಲ್ಲಿ ಹೇಳಿಕೊಂಡಂತೆ, ಧಾರ್ಮಿಕ ಅಲ್ಪಸಂಖ್ಯಾತ ಕೋಟಾದಲ್ಲಿ ಸೀಟು ಪಡೆಯಬೇಕಾದರೆ ಅಭ್ಯರ್ಥಿಗಳು ಮುಸ್ಲಿಂ ಅಥವಾ ಕ್ರೈಸ್ತ ಸಮುದಾಯಕ್ಕೆ ಸೇರಿದವರಾಗಿದ್ದು, ತಹಶೀಲ್ದಾರ್ ಅವರಿಂದ ‘ಧಾರ್ಮಿಕ ಅಲ್ಪಸಂಖ್ಯಾತ’ ದೃಢೀಕರಣ ಪತ್ರ ಹೊಂದಿದ್ದರೆ ಸಾಕು. ಆದರೆ, ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಕನಿಷ್ಠ 10 ವರ್ಷ ಕರ್ನಾಟಕದಲ್ಲೇ ಅಭ್ಯಾಸ ಮಾಡಿರಬೇಕು ಹಾಗೂ ಶಾಲಾ ದಾಖಲೆಗಳಲ್ಲಿ ಅವರ ಮಾತೃಭಾಷೆ (ತುಳು, ಕೊಡವ, ತೆಲುಗು, ತಮಿಳು ಮುಂತಾಗಿ) ನಮೂದಾಗಿರಬೇಕು. ವ್ಯಾಸಂಗ ಪ್ರಮಾಣಪತ್ರದ ಜೊತೆಗೆ ತಹಶೀಲ್ದಾರರಿಂದ ದೃಢೀಕರಣ ಪತ್ರ ಮತ್ತು ನಿಗದಿತ ನಮೂನೆಯಲ್ಲಿ ಅಫಿಡವಿಟ್ ಅನ್ನು ಹಾಜರುಪಡಿಸಬೇಕು. ಈ ನಿಯಮ ಧಾರ್ಮಿಕ ಅಲ್ಪಸಂಖ್ಯಾತರಿಗೆ ಅನ್ವಯವಾಗದಿದ್ದರೂ, ಕರ್ನಾಟಕದಲ್ಲಿ 10 ವರ್ಷ ಅಭ್ಯಾಸ ಮಾಡಿಲ್ಲ ಎಂಬ ಕಾರಣ ನೀಡಿ, ಅನೇಕ ವಿದ್ಯಾರ್ಥಿಗಳಿಗೆ ಧಾರ್ಮಿಕ ಅಲ್ಪಸಂಖ್ಯಾತ ಕೋಟಾದಲ್ಲಿ ಅವಕಾಶವನ್ನು ನಿರಾಕರಿಸಲಾಗಿದೆ.