ಜಮೀನಿನ ಸರ್ವೆ ಮಾಡಿಕೊಡಲು ₹ 3 ಸಾವಿರ ಲಂಚ ಪಡೆದಿದ್ದ ತುಮಕೂರು ತಾಲ್ಲೂಕು ಭೂಮಾಪನಾ ಇಲಾಖೆ ಸರ್ವೇಯರ್ ಒಬ್ಬರಿಗೆ ಜಿಲ್ಲಾ ನ್ಯಾಯಾಲಯವು 3 ವರ್ಷಗಳ ಜೈಲು ಶಿಕ್ಷೆ ವಿಧಿಸಿರುವುದನ್ನು ತಿಳಿದು ಸಮಾಧಾನವಾಯಿತು.
ಇಂದು, ರೈತರಿಗೆ ಜಮೀನಿನ ಸರ್ವೆ ಮಾಡಿಸುವುದು ಅತ್ಯಂತ ಕಷ್ಟದಾಯಕವಾಗಿದೆ. ಅವರ ಜಮೀನಿನ ಹದ್ದುಬಸ್ತು (ಪೋಡಿ) ಸರಿಯಾಗಿ ಇರುವುದೇ ಇಲ್ಲ. ಆಸ್ತಿ ಪಾಲು ಮಾಡಿಕೊಂಡಾಗ, ಮಾರಿದಾಗ ಹೀಗೆ ನಾನಾ ಕಾರಣಗಳಿಗೆ ಸರ್ವೆ ಮಾಡಿಸುವುದು ಅನಿವಾರ್ಯವಾಗಿರುತ್ತದೆ.
ಭೂಮಾಪನಾ ಇಲಾಖೆಗೆ ನಿತ್ಯ ಅಲೆಯಬೇಕಾಗುತ್ತದೆ. ಸರ್ವೆ ಮಾಡಲು ನಿಗದಿಪಡಿಸಿದ ಶುಲ್ಕವನ್ನು ಪಾವತಿಸಿದರೂ ಲಂಚವಾಗಿ ಹೆಚ್ಚಿನ ಹಣ ಕೊಡಬೇಕಾದ ಪರಿಸ್ಥಿತಿ ಇದೆ. ಕೊಡದಿದ್ದರೆ ಕೆಲಸವೇ ಆಗದೆ ಅನಗತ್ಯವಾಗಿ ಕೇಸುಗಳು ದಾಖಲಾಗಿ ಕೋರ್ಟಿಗೂ ತಿರುಗಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಇದು ಇಡೀ ರಾಜ್ಯದ ರೈತರ ಸಮಸ್ಯೆ. ಸರ್ವೇಯರ್ಗಳು ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸಿದರೆ ಅವರ ಸಮಸ್ಯೆ ಅರ್ಧದಷ್ಟು ನಿವಾರಣೆಯಾದಂತೆಯೇ ಸರಿ. ರೈತರೂ ಲಂಚಕೋರರನ್ನು ಹಿಡಿದುಕೊಡಲು ಮುಂದಾಗಬೇಕು. ಭೂಮಾಪಕನೊಬ್ಬನಿಗೆ ಜೈಲು ಶಿಕ್ಷೆ ಆಗಿರುವುದು ಇತರರಿಗೆ ಎಚ್ಚರಿಕೆಯ ಗಂಟೆಯೂ ಆಗಿದೆ.