ವಾಸ್ತವ ಎಂದರೆ ರೈಲು ನಿಲ್ದಾಣಕ್ಕೆ ಹೋಗಿ ವಿಚಾರಿಸಿದರೂ ‘ಕೊರೊನಾ ಕಾರಣಕ್ಕೆ ಹಿರಿಯ ನಾಗರಿಕರ ರಿಯಾಯಿತಿ ತೆಗೆಯಲಾಗಿದೆ, ಹಾಗಾಗಿ ಅವರು ಪೂರ್ಣ ವೆಚ್ಚವನ್ನು ಪಾವತಿಸಿ ಕಾಯ್ದಿರಿಸಬೇಕು’ ಎಂಬ ಉತ್ತರ ಬಂದಿದೆ. ‘ರಿಯಾಯಿತಿ ತೆಗೆದಿದ್ದೀರಾ’ ಎಂದು ಪ್ರಶ್ನಿಸಿದರೆ, ‘ಸದ್ಯಕ್ಕೆ ಇಲ್ಲ, ಮುಂದೆ ಬದಲಾಗಬಹುದು’ ಎಂಬ ಉತ್ತರ ನೀಡುತ್ತಾರೆ. ಇದೆಲ್ಲದರ ಅರ್ಥವೆಂದರೆ, ಎಲ್ಲ ರೀತಿಯ ಸಬ್ಸಿಡಿ, ರಿಯಾಯಿತಿಗಳನ್ನು ತೆಗೆಯುವುದಾಗಿದೆ. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು, ವಿಶೇಷವಾಗಿ ರಾಜ್ಯದ ಲೋಕಸಭಾ ಸದಸ್ಯರು ಹಾಗೂ ರಾಜ್ಯವನ್ನು ಪ್ರತಿನಿಧಿಸುವ ರಾಜ್ಯಸಭಾ ಸದಸ್ಯರು ಧ್ವನಿ ಎತ್ತಿ, ಹಿರಿಯ ನಾಗರಿಕರ ಹಕ್ಕುಗಳನ್ನು ಸಂರಕ್ಷಿಸಲು ಮುಂದಾಗಬೇಕಿದೆ.