ರಾಜ್ಯದ ಎಷ್ಟೊಂದು ಕಡೆ ಕೆರೆಗಳು ಒಣಗಿವೆ, ನದಿಕೊಳ್ಳಗಳು ಮಾಲಿನ್ಯದ ಮಡುಗಳಾಗಿವೆ, ಜೀವಲೋಕ ಹೈರಾಣಾಗಿದೆ. ಕುಕ್ಕೆ ಸುಬ್ರಹ್ಮಣ್ಯದ ಬಳಿಯೇ ಕುಮಾರಧಾರಾದಲ್ಲಿ ಮೀನುಗಳು ವಿಷಪ್ರಾಶನದಿಂದ ಸತ್ತು ತೇಲುತ್ತಿವೆ. ಯಾಕೆ ಚಿನ್ನದ ರಥದ ಹುಚ್ಚು? ಅದೇನೋ ‘2005ರಲ್ಲೇ ಟೆಂಡರ್ ಕರೆದಿದ್ದು, ಈಗಿನದಲ್ಲ’ ಎಂದೆಲ್ಲ ನಿಮ್ಮ ಸಚಿವಾಲಯ ಹೇಳಿದೆ. ನೀವು ಹಿಂದಿನ ಬಾರಿ ಮುಖ್ಯಮಂತ್ರಿ
ಯಾಗಿದ್ದಾಗ ಕೈಗೊಂಡ ಇತರ ಎಷ್ಟೊಂದು ನಿರ್ಧಾರಗಳು ಜಾರಿಗೆ ಬಾರದೆ ನನೆಗುದಿಗೆ ಬಿದ್ದಿವೆ ಗಮನಿಸಿದ್ದೀರಾ? ನಿಮ್ಮದೇ ಸಹಿ ಇರುವ ‘ಮಾನವ ಅಭಿವೃದ್ಧಿ ಯೋಜನಾ ವರದಿ’ಯನ್ನು (2006) ಮತ್ತೊಮ್ಮೆ ತೆಗೆಸಿ ನೋಡಿ. ದುರ್ಬಲ ವರ್ಗಕ್ಕೆ ನೀರು, ಪೌಷ್ಟಿಕ ಆಹಾರ, ಶೌಚ ವ್ಯವಸ್ಥೆ, ಶಿಕ್ಷಣ, ಆಸ್ಪತ್ರೆ, ಉದ್ಯೋಗ ಎಲ್ಲವುಗಳ ಭರವಸೆ ನೀಡಿದ್ದಿರಿ. ಜನತಾ ಜನಾರ್ದನನಿಗೆ ಹೇಳಿಕೊಂಡ ಆ ಎಲ್ಲ ಹರಕೆಗಳನ್ನೂ ಒಪ್ಪಿಸಿದ್ದೀರಾ?