‘ಕಲಿಯುಗ ಕಳೆದು ಸತ್ಯಯುಗ ಆರಂಭವಾಗುತ್ತದೆ, ಕ್ಷುದ್ರ ಶಕ್ತಿಯಿಂದ ಸತ್ತವರು ಕೆಲವೇ ಗಂಟೆಗಳಲ್ಲಿ ಮರುಜೀವ ಪಡೆಯುತ್ತಾರೆ’ ಎಂಬ ಮೂಢನಂಬಿಕೆಯಿಂದ, ತಾವು ಹೆತ್ತ ಇಬ್ಬರು ಮಕ್ಕಳನ್ನೇ ಪೋಷಕರು ಡಂಬಲ್ಸ್ನಿಂದ ಹೊಡೆದು ಕೊಂದಿರುವ ಘಟನೆ (ಪ್ರ.ವಾ., ಜ. 27) ಆಘಾತಕಾರಿ. ಇವರಲ್ಲಿ ತಂದೆ ಎಂ.ಎಸ್ಸಿ, ಪಿಎಚ್.ಡಿ ಪದವೀಧರ, ಸರ್ಕಾರಿ ಕಾಲೇಜಿನ ಉಪ ಪ್ರಾಂಶುಪಾಲ ಹಾಗೂ ತಾಯಿ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದವರು. ಇದನ್ನು ನೋಡಿದರೆ, ನಮ್ಮದು ಸುಶಿಕ್ಷಿತ ಸಮಾಜ ಎಂದು ಕರೆಯಲು ನಾಚಿಕೆಯಾಗುತ್ತದೆ. ದೇಶದಲ್ಲಿ ಹೆಮ್ಮರವಾಗಿ ಬೇರೂರಿರುವ ಮೌಢ್ಯ ಆಚರಣೆ, ಮೂಢನಂಬಿಕೆಗಳನ್ನು ಬಹುಶಃ ವಿಶ್ವದ ಬೇರೆ ಯಾವ ದೇಶದಲ್ಲಿಯೂ ನಾವು ಈ ಪ್ರಮಾಣದಲ್ಲಿ ಕಾಣಲು ಸಾಧ್ಯವಿಲ್ಲ. ಉನ್ನತ ಶಿಕ್ಷಣ ಪಡೆದು ಪ್ರಜ್ಞಾವಂತರು ಎನಿಸಿಕೊಂಡವರಲ್ಲೇ ಇಂತಹ ಮೂಢನಂಬಿಕೆಗಳು ಕಂಡುಬರುತ್ತಿರುವುದು ವಿಷಾದನೀಯ. ಆಧುನಿಕತೆಗೆ ತಕ್ಕಂತೆ ಮೌಢ್ಯಗಳೂ ರೂಪಾಂತರಗೊಂಡು, ಇದನ್ನು ಅನುಸರಿಸುವವರು ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಸಮಾಜವನ್ನೂ ಹಾಳು ಮಾಡುತ್ತಿದ್ದಾರೆ. ಅತಿಯಾದ ಮೌಢ್ಯ ಮತ್ತು ಭ್ರಮೆ ಯಾರಲ್ಲಿ ಯಾವ ರೂಪದಲ್ಲೇ ಇರಲಿ ಅದು ಅವರ ಸ್ವತಂತ್ರ ಆಲೋಚನೆ, ಸ್ವಾಭಿಮಾನ ಮತ್ತು ಆತ್ಮವಿಶ್ವಾಸವನ್ನು ಬಲಿ ತೆಗೆದುಕೊಳ್ಳುತ್ತದೆ ಎಂಬುದಕ್ಕೆ ಇಂತಹ ಘಟನೆಗಳೇ ಸಾಕ್ಷಿ.