ನಮ್ಮ ವಿಶ್ವವಿದ್ಯಾಲಯಗಳ ಪಿಎಚ್.ಡಿ ಪ್ರಬಂಧಗಳ ಬಗೆಗೆ ಎನ್. ವಸಂತ ರಾಜು ಚರ್ಚಿಸಿದ್ದಾರೆ (ಚರ್ಚೆ, ಜೂನ್ 17). ಅವರಾಗಲೀ ಅಥವಾ ಇದಕ್ಕೆ ಮುನ್ನ ಮೂಲ ಬರಹ ಬರೆದ ಎನ್.ಎಸ್.ಗುಂಡೂರ ಅವರಾಗಲೀ (ಸಂಗತ, ಜೂನ್ 12) ಗಮನಿಸದೇ ಹೋಗಿರುವ ಅಥವಾ ಗಮನಿಸಿಯೂ ಹೇಳಲು ಹಿಂಜರಿದಿರುವ ಮೂಲ ಸಂಗತಿ ಎಂದರೆ, ನಮ್ಮ ಸರ್ಕಾರಿ ವಿಶ್ವವಿದ್ಯಾಲಯಗಳಿಗೆ, ನಿರ್ದಿಷ್ಟವಾಗಿ ಕಲೆ ಮತ್ತು ಮಾನವಿಕ ವಿಷಯಗಳ ‘ಅಧ್ಯಯನ’ಕ್ಕಾಗಿ ಬರುತ್ತಿರುವ ಮೂಲ ಸರಕೇ ಕಳಪೆಯಾಗಿದೆ ಎಂಬುದು. ಈ ವಿದ್ಯಮಾನ ಆರಂಭವಾಗಿ ಹಲವು ವರ್ಷಗಳೇ ಸಂದಿರುವುದರಿಂದ ಪಿಎಚ್.ಡಿ ಮಾರ್ಗದರ್ಶಕರೂ, ಮೌಲ್ಯಮಾಪಕರೂ ಆಗಿರುವ ಬಹುತೇಕ ಅಧ್ಯಾಪಕರ ಗುಣಮಟ್ಟವೇ ಕಳಪೆಯಾಗಿದೆ. ಯಾವುದೇ ನೆಪ ಹೇಳದೆ ಇದನ್ನು ಒಪ್ಪಿಕೊಂಡು, ಇದು ಏಕೆ ಮತ್ತು ಹೇಗೆ ಆಯಿತು ಎಂಬುದನ್ನು ಸಮಗ್ರವಾಗಿ ಪರಿಶೀಲಿಸುವ ಮನಸ್ಸು ಮಾಡುವವರೆಗೆ ಯುಜಿಸಿ ನಿಯಮ, ನೇಮಕಾತಿ ಷರತ್ತಿನಂತಹ ಇತರ ಕಾರಣಗಳನ್ನು ಹುಡುಕುವ ವ್ಯರ್ಥ ಚರ್ಚೆ ಮುಂದುವರಿದೇ ಇರುತ್ತದೆ. ಇಂದು ನಮ್ಮ ವಿಶ್ವವಿದ್ಯಾಲಯಗಳಿಗೆ ನೇಮಕವಾಗುತ್ತಿರುವ ಕುಲಪತಿಗಳನ್ನು ಮತ್ತು ಅವರ ಆಯ್ಕೆಗೆ ಸರ್ಕಾರ ಅನುಸರಿಸುತ್ತಿರುವ ಮಾನದಂಡಗಳನ್ನು ನೋಡಿದರೆ, ಈ ಪರಿಶೀಲನೆಯ ಸಾಧ್ಯತೆ ದೂರದ ಕನಸಾಗಿಯೇ ಕಾಣುತ್ತದೆ. ಪಿಎಚ್.ಡಿ ಪ್ರಬಂಧವನ್ನು ಬರೆದುಕೊಡುವ ದಂಧೆ ನಡೆಸುವವರೇ ಯಾವುದೇ ಸಂಕೋಚವಿಲ್ಲದೆ ಕುಲಪತಿ ಹುದ್ದೆಗೆ ಆಕಾಂಕ್ಷಿಗಳಾಗಿರುವುದು ಬಹಳ ಜನಕ್ಕೆ ಗೊತ್ತಿರದ ಸಂಗತಿಯೇನಲ್ಲ.