ಬಡವರಿಗೆ ಉಚಿತವಾಗಿ ಸವಲತ್ತುಗಳನ್ನು ನೀಡುವ ಕ್ರಮವನ್ನು ನಮ್ಮ ಪ್ರಧಾನಿ ‘ಪುಕ್ಕಟೆ ಕಾಣಿಕೆ’ (ಫ್ರೀಬೀಸ್) ಎಂದು ಅಣಕವಾಡಿದ್ದಾರೆ. ತಮ್ಮ ಆಡಳಿತಾವಧಿಯಲ್ಲಿ ಜಮಾಖರ್ಚು ಖಾತೆಯಿಂದ ಹೂಡಿಕೆದಾರರ ₹ 10.8 ಲಕ್ಷ ಕೋಟಿ ಸಾಲವನ್ನು ವಾಣಿಜ್ಯ ಬ್ಯಾಂಕುಗಳು ರೈಟ್ಆಫ್ ಮಾಡಿರುವುದನ್ನು ಏನೆಂದು ಕರೆಯುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಬಡವರು, ರೈತರು, ಕಾರ್ಮಿಕರು ಮುಂತಾದ ದುರ್ಬಲ ವರ್ಗಗಳಿಗೆ ನೀಡುವ ಸೌಲಭ್ಯಗಳನ್ನು ‘ಅನುತ್ಪಾದಕ’ ಎಂದೂ ಕೈಗಾರಿಕೋದ್ಯಮಿಗಳಿಗೆ ನೀಡುವ ಸೌಲಭ್ಯಗಳನ್ನು ‘ಉತ್ಪಾದಕ’ ಎಂದೂ ಪರಿಗಣಿಸುವ ಕ್ರಮ ಪ್ರಚಲಿತದಲ್ಲಿದೆ. ಹಾಗಾದರೆ ಬ್ಯಾಂಕುಗಳು ರೈಟ್ಆಫ್ ಮಾಡಿರುವ ಮೊತ್ತ ಉತ್ಪಾದಕವೇ? ಸಾಲ ನೀಡಿಕೆಯಲ್ಲಿ ಬಡವರು- ಶ್ರೀಮಂತರು ಎಂದು ತಾರತಮ್ಯ ಮಾಡುವ ಮತ್ತು ರೈಟ್ಆಫ್ ಕ್ರಮವು
ಆರ್ಥಿಕತೆಯಲ್ಲಿ ಅಸಮಾನತೆಯನ್ನು ಹೆಚ್ಚಿಸುತ್ತವೆ.