ಲೈಂಗಿಕ ಕಾರ್ಯಕರ್ತೆಯರು, ತೃತೀಯ ಲಿಂಗಿಗಳು ಮತ್ತು ಪುರುಷ ಸಲಿಂಗಕಾಮಿಗಳು ಸದ್ಯಕ್ಕೆ ದಂಧೆಯಲ್ಲಿ ತೊಡಗದಂತೆ ಪ್ರತೀ ಜಿಲ್ಲೆಯ ಕರ್ನಾಟಕ ಏಡ್ಸ್ ನಿಯಂತ್ರಣ ಘಟಕದ ಮೂಲಕ ಎಚ್ಚರಿಕೆ ಹಾಗೂ ಸೂಕ್ತ ತಿಳಿವಳಿಕೆಯನ್ನು ಆರೋಗ್ಯ ಇಲಾಖೆ ತುರ್ತಾಗಿ ನೀಡಬೇಕಾಗಿದೆ. ತೃತೀಯ ಲಿಂಗಿಗಳ ತಕ್ಷಣದ ಜೀವನೋಪಾಯಕ್ಕೆಂದು ಸರ್ಕಾರದ ವತಿಯಿಂದ ಎರಡು ತಿಂಗಳ ದವಸ ಧಾನ್ಯವನ್ನೂ ಪಿಂಚಣಿಯನ್ನೂ ನೀಡಬೇಕೆಂದು ಹೈಕೋರ್ಟ್ ಆದೇಶಿಸಿರುವುದರಿಂದ, ಬಹಳಷ್ಟು ಜಿಲ್ಲೆಗಳಲ್ಲಿ ಈ ಆದೇಶ ಜಾರಿಯಾಗುತ್ತಿದೆ. ಇದೇ ಸಂದರ್ಭದಲ್ಲಿ ಬಡತನ, ಕಳ್ಳಸಾಗಣೆ, ಬಾಲ್ಯವಿವಾಹದಂತಹ ಕಾರಣಕ್ಕಾಗಿ ದಂಧೆಗೆ ಬಿದ್ದು, ಆರೋಗ್ಯ ಇಲಾಖೆಯ ಕಾಂಡೋಂ ಹಂಚಿಕೆಯ ಜಾಲದಡಿ ರಾಜ್ಯದಾದ್ಯಂತ ನೋಂದಣಿಯಾಗಿರುವ ಲೈಂಗಿಕ ದಮನಿತ ಹೆಣ್ಣುಮಕ್ಕಳು ಈ ಸಂದರ್ಭದಲ್ಲಿ ಜೀವನ ನಿರ್ವಹಣೆಗೆ ಅತ್ಯಂತ ಕಷ್ಟಪಡುತ್ತಿದ್ದಾರೆ. ಇವರಿಗೂ ತಕ್ಷಣವೇ ಪಡಿತರ, ಸಹಾಯಧನ ನೀಡಬೇಕು.