ಕನ್ನಡದ ದೃಶ್ಯ ಮಾಧ್ಯಮಗಳಲ್ಲಿ ವಾರ್ತೆಗಳನ್ನು ಓದುವಾಗ, ಘಟನೆಗಳ ಸುದ್ದಿಗಳನ್ನು ಅಥವಾ ಪ್ರಮುಖರ ಹೇಳಿಕೆಗಳನ್ನು ತಿಳಿಸುವ ಜೊತೆಗೆ ವೈಯಕ್ತಿಕ ಅಭಿಪ್ರಾಯವನ್ನೂ ವೀಕ್ಷಕರ ಮೇಲೆ ಹೇರಲಾಗುತ್ತದೆ. ಒಂದು ಘಟನೆ ಅಥವಾ ಹೇಳಿಕೆಗೆ ಸಂಬಂಧಿಸಿದಂತೆ ಪೂರಕವಾದ ಹಿನ್ನೆಲೆ, ಕೆಲವೊಂದು ವಿವರಣೆ ನೀಡುವುದರಿಂದ ವೀಕ್ಷಕರು ವಿಷಯವನ್ನು ಸಮಗ್ರವಾಗಿ ಗ್ರಹಿಸಲು ಅನುಕೂಲವಾಗುತ್ತದೆ. ಉದಾಹರಣೆಗೆ, ಹಿಂದಿ ಭಾಷೆಯನ್ನು ಇಂಗ್ಲಿಷ್ಗೆ ಪರ್ಯಾಯವಾಗಿ ಬೆಳೆಸಲು ದೇಶದಾದ್ಯಂತ ಹಿಂದಿಗೆ ಪ್ರಾಮುಖ್ಯತೆ ನೀಡಬೇಕು ಎಂಬ ಕೇಂದ್ರ ಗೃಹ ಸಚಿವರ ಹೇಳಿಕೆ. ಇದಕ್ಕೆ ಪೂರಕವಾಗಿ, ನಮ್ಮ ಸಂವಿಧಾನದಲ್ಲಿ ಅಧಿಕೃತ ಭಾಷೆಗಳಾಗಿ ಪರಿಗಣಿಸಿರುವ ಭಾಷೆಗಳ ಬಗ್ಗೆ ಹಾಗೂ ಭಾರತದಲ್ಲಿ ಯಾವ ಭಾಷೆಯನ್ನೂ ರಾಷ್ಟ್ರೀಯ ಭಾಷೆಯಾಗಿ ಘೋಷಿಸಿಲ್ಲ ಎಂಬಂತಹ ಮಾಹಿತಿ ನೀಡಬಹುದು. ಅಲ್ಲದೆ ಅರವತ್ತರ ದಶಕದಲ್ಲಿ ತಮಿಳುನಾಡಿನಲ್ಲಿ ಹಿಂದಿ ವಿರೋಧಿ ಚಳವಳಿಯ ಕಾರಣದಿಂದ ಆದ ಅನಾಹುತಗಳ ವಿವರ ನೀಡಬಹುದು.