ಈಗಾಗಲೇ ಹವಾಮಾನ ವೈಪರೀತ್ಯ, ಕೊರೊನಾ ತಂದಿಟ್ಟ ಬಿಕ್ಕಟ್ಟು, ಬೆಲೆ ಅನಿಶ್ಚಿತತೆ ಮೊದಲಾದ ಸಂಕಷ್ಟಗಳಿಂದ ಬಳಲಿ ಬೆಂಡಾಗಿರುವ ನಮ್ಮ ರೈತಾಪಿ ವರ್ಗ, ಆ ಕ್ಷಣದ ಆವೇಶಕ್ಕೊಳಗಾಗಿ ಭೂಮಿ ಮಾರಿ, ನಂತರ ಕೊಳ್ಳಲಾಗದೇ ಪರಿತಪಿಸುವುದು ಅಕ್ಷರಶಃ ಸತ್ಯ. ಭವಿಷ್ಯದಲ್ಲಿ ಬಹುತೇಕ ಕೃಷಿಭೂಮಿಯು ಉಳ್ಳವರ ಪಾಲಾಗಿ, ನಾಡು ಕಾಂಕ್ರೀಟ್ ಕಾಡಾದರೆ ನಾವು ಉಣ್ಣುವುದೇನನ್ನು, ಮಣ್ಣನ್ನೇ? ನೋಟುಗಳನ್ನೇ? ಸರ್ಕಾರ ಯಾವುದೇ ಆಮಿಷಕ್ಕೆ ಬಗ್ಗದೆ ಈ ರೈತ ವಿರೋಧಿ ಕಾನೂನನ್ನು ಜಾರಿಗೊಳಿಸದಿರುವ ಮೂಲಕ ರೈತರ ಹಿತ ಕಾಯಬೇಕು.