‘ತುರ್ತು ಸಂದರ್ಭಗಳಲ್ಲಿ ರಾಜ್ಯಗಳು ‘ಕೇಂದ್ರದತ್ತ ವಾಲುವುದು’ ಎಂದರೆ... ಬಲಿಷ್ಠ ಕೇಂದ್ರದ ಅಗತ್ಯ’ ಎಂದು ಸೂರ್ಯ ಪ್ರಕಾಶ್ ತಮ್ಮ ಅಂಕಣ ಬರಹದಲ್ಲಿ ವಾದಿಸಿದ್ದಾರೆ. (ಪ್ರ.ವಾ., ಆ. 20). ಕೋವಿಡ್ ಸೋಂಕು ರೋಗದಂಥ ಅಪಾಯವನ್ನು ನಿಯಂತ್ರಿಸುವಲ್ಲಿ ಕೇಂದ್ರೀಕೃತ ವ್ಯವಸ್ಥೆ ಬೇಕಾಗುತ್ತದೆ ಎಂಬುದು ಅವರ ವಾದದ ಹೂರಣ. ಅಂಬೇಡ್ಕರ್ ಅವರ ವ್ಯಾಖ್ಯಾನ ಮತ್ತು ಸಂವಿಧಾನಾತ್ಮಕವಾದ ಆಡಳಿತ ಅವಕಾಶಗಳನ್ನು ಉಲ್ಲೇಖಿಸುತ್ತಾ ‘ಕೇಂದ್ರೀಕೃತ ಆಡಳಿತ’ ವ್ಯವಸ್ಥೆಯ ಪರವಾಗಿ ಅವರು ಬರೆದಿದ್ದಾರೆ. ಆದರೆ, ಇಂತಹ ವಾದವನ್ನು ಒಪ್ಪುವ ಅನೇಕರು, ಕೋವಿಡ್ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಇದುವರೆಗೂ ಮಾಡಿರುವ ಕಾರ್ಯವು ಕೇವಲ ಆದೇಶ ಕೊಡುವುದಕ್ಕೆ ಸೀಮಿತವಾಗಿದೆ ಎಂಬ ಮುಖ್ಯವಾದ ಅಂಶವನ್ನು ಮರೆತಿದ್ದಾರೆ. ಈ ಸವಾಲನ್ನು ಎದುರಿಸುವ ಪೂರ್ಣ ಜವಾಬ್ದಾರಿ ಹೊತ್ತಿರುವ ರಾಜ್ಯ ಸರ್ಕಾರಗಳು ಸೊರಗಿವೆ, ತಿಣುಕಾಡುತ್ತಿವೆ. ಬರ ಬರಲಿ, ನೆರೆ ಬರಲಿ ಕೇಂದ್ರ ಸರ್ಕಾರದ ಎದುರು ರಾಜ್ಯ ಸರ್ಕಾರ, ಜಿಎಸ್ಟಿ ರೂಪದಲ್ಲಿ ತಾನು ಕೊಟ್ಟ ಹಣವನ್ನು ವಾಪಸ್ ಪಡೆಯಲು ಅಂಗಲಾಚುವ ಪರಿಸ್ಥಿತಿ ಇದೆ. ಕೇಂದ್ರದತ್ತ ವಾಲುವುದು ಎಂದರೆ ಇದೇ ಏನು?